ರಾಷ್ಟ್ರ ಪ್ರಶಸ್ತಿ ವಿಜೇತ ರಂಗಕರ್ಮಿ ಸದಾನಂದ ಸುವರ್ಣ ನಿಧನ

ಹೊಸದಿಗಂತ ಡಿಜಿಟಲ್ ಡೆಸ್ಕ್:

ಕರ್ನಾಟಕ ಕರಾವಳಿಯ ಮಂಗಳೂರಿನ ಚಿತ್ರ ನಿರ್ಮಾಪಕ, ಲೇಖಕ, ಹಿರಿಯ ರಂಗಕರ್ಮಿ ಸ್ವರ್ಣಕಮಲ ಪ್ರಶಸ್ತಿ ಪುರಸ್ಕೃತ ಸದಾನಂದ ಸುವರ್ಣ (೯೨) ವಯೋಸಹಜ ಅಸ್ವಸ್ಥತೆಯಿಂದ ಖಾಸಗಿ ಆಸ್ಪತ್ರೆಯಲ್ಲಿ ಮಂಗಳವಾರ ನಿಧನ ಹೊಂದಿದ್ದಾರೆ.

ಮೂಲ್ಕಿ ಮೂಲತಃ ಸುವರ್ಣ ಅವರು ಹಲವು ವರ್ಷಗಳ ಕಾಲ ಮುಂಬಯಿನಲ್ಲಿ ವಾಸವಾಗಿದ್ದು, ಕನ್ನಡ ರಂಗಭೂಮಿಯಲ್ಲಿ ಹಲವು ವರ್ಷಗಳ ಕಾಲ ಸೇವೆ ಸಲ್ಲಿಸಿದ್ದರು. ಧರ್ಮಚಕ್ರ, ಸುಳಿ, ಡೊಂಕುಬಾಲದ ನಾಯಕರು, ಕೋರ್ಟ್ ಮಾರ್ಷಲ್, ಉರುಳು ಮತ್ತಿತರ ಜನಪ್ರಿಯ ನಾಟಕ ರಚನೆ ಮಾಡಿದ ಹೆಗ್ಗಳಿಕೆ ಸುವರ್ಣ ಇವರದ್ದು.

ಇವರ ‘ಗುಡ್ಡೆದ ಭೂತ’ ಧಾರವಾಹಿ ದೂರದರ್ಶನದಲ್ಲಿ ಬಹಳ ಜನಮೆಚ್ಚುಗೆ ಗಳಿಸಿದ್ದು, ಘಟಶ್ರಾದ್ಧ ಸಿನಿಮಾಕ್ಕೆ ಸ್ವರ್ಣಕಮಲ ಪ್ರಶಸ್ತಿ ಸಿಕ್ಕಿರುತ್ತದೆ. ಮಂಗಳೂರಿನ ಹವ್ಯಾಸಿ ರಂಗಭೂಮಿಗೆ ಹೊಸ ಸ್ಪರ್ಶ ನೀಡಿದ್ದರು. ಇತರ ಭಾಷೆಯ ನಾಟಕಗಳನ್ನೂ ಕನ್ನಡಕ್ಕೆ ಅನುವಾದಿಸಿದ್ದು ಕುರುಡು ಕಾಂಚನ, ಗುಡ್ಡೆದ ಭೂತ, ಮತ್ತು ಗೊಂದುಲು ಇವರ ಸ್ವರಚಿತ ನಾಟಕಗಳಾಗಿವೆ. ಧರ್ಮಚಕ್ರ, ಸೂಳಿ, ಡೊಂಕುಬಾಲದ ನಾಯಕರು, ಕೋರ್ಟ್ ಮಾರ್ಷಲ್ ಮತ್ತು ಉರುಳು ಅವರ ಅತ್ಯಂತ ಜನಪ್ರಿಯ ನಾಟಕಗಳು. ಹುಚ್ಚು ಮನಸ್ಸಿನ ಹತ್ತು ಮುಖಗಳು ಎಂಬ ಸಾಕ್ಷ ಚಿತ್ರ ವ್ಯಾಪಕವಾಗಿ ಮೆಚ್ಚುಗೆ ಗಳಿಸಿತ್ತು.

ಮಹಾರಾಷ್ಟ್ರದ ನಾಟಕ ಅಕಾಡೆಮಿಯಿಂದ ನಟನಾ ಡಿಪ್ಲೊಮಾ ಮತ್ತು ಛಾಯಾಗ್ರಹಣದಲ್ಲಿ ಪ್ರಮಾಣಪತ್ರ ಪಡೆದಿದ್ದರು. ಕರ್ನಾಟಕ ಸರ್ಕಾರದ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಕೊಡಮಾಡುವ ರಾಷ್ಟ್ರೀಯ ಮತ್ತು ರಾಜ್ಯ ಪ್ರಶಸ್ತಿಗಳಲ್ಲಿನ ೨೦೨೩-೨೪ನೇ ಸಾಲಿನ ಬಿ.ವಿ ಕಾರಂತ ಪ್ರಶಸ್ತಿ, ಬ್ರಹ್ಮಶ್ರೀ ನಾರಾಯಣ ಗುರು ಸ್ವಾಮಿ ಪ್ರಕಾಶನ ಮತ್ತು ಚಾರಿಟಬಲ್ ಟ್ರಸ್ಟ್‌ನ ವಾರ್ಷಿಕ ಆತ್ಮಶಕ್ತಿ ಪ್ರಶಸ್ತಿ, ೧೯೭೭ರಲ್ಲಿ ಗಿರೀಶ್ ಕಾಸರವಳ್ಳಿ ನಿರ್ದೇಶನದ ಸುವರ್ಣ ಅವರ ಘಟಶ್ರಾದ್ಧ ಪ್ರತಿಷ್ಠಿತ ಸ್ವರ್ಣ ಕಮಲ ಪ್ರಶಸ್ತಿ, ಸುವರ್ಣರ ‘ಕುಬಿ ಮಟ್ಟು ಇಯಾಲ’ ಚಿತ್ರಕ್ಕೆ ಕರ್ನಾಟಕ ರಾಜ್ಯ ಸರ್ಕಾರದ ಅತ್ಯುತ್ತಮ ಚಲನಚಿತ್ರ ಪ್ರಶಸ್ತಿಗೆ ಭಾಜನರಾಗಿದ್ದರು.

ಮುಂಬಯಿಯಲ್ಲಿ ಸುವರ್ಣರ ಅಪಾರ ಸಂಖ್ಯೆಯ ಅಭಿಮಾನಿ ಬಳಗವಿದ್ದು ಸದಾನಂದ ಸುವರ್ಣ ಸಾಂಸ್ಕೃತಿಕ ಪ್ರತಿಷ್ಠಾನವನ್ನೇ ಸ್ಥಾಪಿಸಿರುವರು. ಆ ಮೂಲಕ ವಾರ್ಷಿಕವಾಗಿ ದಿವಂಗತ ಡಾ. ಶಿವರಾಮ ಕಾರಂತರ ಸ್ಮರಣೆಯಲ್ಲಿ ಕನ್ನಡಿಗರ ಮಕ್ಕಳಿಗಾಗಿ ಚಿತ್ರ ಬಿಡಿಸುವ ಸ್ಪರ್ಧೆಯನ್ನು ಏರ್ಪಡಿಸುತ್ತಿದ್ದರು.

 

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!