ಪಠ್ಯೇತರ ಚಟುವಟಿಕೆಗಳು ಸವಾಲುಗಳನ್ನು ಸಮರ್ಪಕವಾಗಿ ನಿಭಾಯಿಸಲು ಸಹಕಾರಿ: ವಿದ್ವಾನ್ ಜಿ.ಎಸ್.ನಟೇಶ್

ಹೊಸದಿಗಂತ ಡಿಜಿಟಲ್ ಡೆಸ್ಕ್:

ಬದಿಯಡ್ಕ ಶ್ರೀ ಭಾರತೀ ವಿದ್ಯಾಪೀಠದ ಹೈಸ್ಕೂಲು ವಿಭಾಗದ ವಿದ್ಯಾರ್ಥಿಗಳು ಒಬ್ಬ ವ್ಯಕ್ತಿಯ ವ್ಯಕ್ತಿತ್ವವು ಅವನ ದಿನದ ಚಟುವಟಿಕೆಗಳಲ್ಲಿ ಗೋಚರಿಸಲ್ಪಡುತ್ತದೆ. ಶಾಲಾ ಶಿಕ್ಷಣದ ಜೊತೆಯಲ್ಲಿ ಕಲಿತಂತಹ ಪಠ್ಯಾಧಾರಿತ ವಿಚಾರಗಳನ್ನು ಬದುಕಿನಲ್ಲಿ ಕಂಡುಕೊಂಡಾಗ ಅದು ಶಾಶ್ವತವಾಗಿ ಮನದಲ್ಲಿರುತ್ತದೆ. ನನ್ನ ಬದುಕು ನನ್ನ ಕೈಯಲ್ಲಿ, ನನ್ನ ಎಲ್ಲಾ ಕಾರ್ಯಚಟುವಟಿಕೆಗಳನ್ನು ನಾನೇ ಇನ್ನೊಬ್ಬರ ಮೇಲೆ ಅವಲಂಬಿತವಾಗದೆ ನಾನೇ ನಿರ್ವಹಿಸಿದಾಗ ಆತ್ಮಧೈರ್ಯ ವೃದ್ಧಿಯಾಗುತ್ತದೆ. ಪಠ್ಯೇತರ ಚಟುವಟಿಕೆಗಳು ಬದುಕಿನಲ್ಲಿ ಬರುವ ಸವಾಲುಗಳನ್ನು ಸಮರ್ಪಕವಾಗಿ ನಿಭಾಯಿಸಲು ಸಹಕರಿಸುತ್ತವೆ ಎಂದು ವಿದ್ವಾನ್ ಜಿ.ಎಸ್.ನಟೇಶ್ ಶಿವಮೊಗ್ಗ ಹೇಳಿದರು.

ಬದಿಯಡ್ಕ ಶ್ರೀ ಭಾರತೀ ವಿದ್ಯಾಪೀಠದಲ್ಲಿ ಗುರುವಾರ ಪ್ರೌಢಶಾಲಾ ವಿದ್ಯಾರ್ಥಿಗಳೊಂದಿಗೆ ನಡೆದ ಸಂವಾದ ಕಾರ್ಯಕ್ರಮದಲ್ಲಿ ಅವರು ಅತಿಥಿಗಳಾಗಿ ಆಗಮಿಸಿ ಮಾತನಾಡಿದರು. ದಿನದ ಆರಂಭದಲ್ಲಿ ಚಾಪೆಯನ್ನು ಶಿಸ್ತುಬದ್ಧವಾಗಿ ಮಡಚಿಡುವಲ್ಲಿಂದ ಮೊದಲ್ಗೊಂಡು ರಾತ್ರಿ ಮಲಗುವ ತನಕದ ನನ್ನ ಕಾರ್ಯಕ್ರಮಗಳನ್ನು ಯಾವುದೇ ಉದಾಸೀನತೆಯಿಲ್ಲದೆ ಸ್ವಯಂ ಪ್ರೇರಣೆಯಿಂದ ಆಸಕ್ತಿದಾಯಕವಾಗಿ ಮಾಡಿದಾಗ ಸಿಗುವ ಆನಂದ ನಮ್ಮನ್ನು ಸಬಲರನ್ನಾಗಿಸುತ್ತದೆ. ಈಗಿನ ಕಾಲಘಟ್ಟದಲ್ಲಿ ಹೊರಗಡೆ ಸಿಗುವಂತಹ ನಾಲಿಗೆಯ ರುಚಿಯನ್ನು ಹೆಚ್ಚಿಸುವ ತಿಂಡಿ ತಿನಿಸುಗಳ ಆಕರ್ಷಣೆಯನ್ನು ಬದಿಗೊತ್ತಿ ಬೌದ್ಧಿಕವಾಗಿ ವಿಕಾಸಕ್ಕಾಗಿ ಸಹಕರಿಸುವ ಆಹಾರತಿಂಡಿಗಳನ್ನು ಸೇವಿಸುವುದು ಬುದ್ಧಿವಂತರ ಲಕ್ಷಣ. ಅವಕಾಶಗಳ ಸದ್ಭಳಕೆ ಮುಂದಿನ ಬದುಕಿಗೆ ಸೋಪಾನವಾಗಲಿ ಎಂದರು.

ಮಕ್ಕಳ ಪ್ರಶ್ನೆಗಳಿಗೆ ಅರ್ಥವತ್ತಾಗಿ ಅವರು ಉತ್ತರಿಸಿದರು. ಈ ಸಂದರ್ಭದಲ್ಲಿ ಅಗಲ್ಪಾಡಿ ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನದ ಆಡಳಿತ ಮೊಕ್ತೇಸರ ಎ.ಜಿ.ಶರ್ಮ ಕೋಳಿಕ್ಕಜೆ ಉಪಸ್ಥಿತರಿದ್ದರು. ಶಾಲಾ ಆಡಳಿತ ಸಮಿತಿ ಸದಸ್ಯ ಡಾ. ಬೇ.ಸೀ.ಗೋಪಾಲಕೃಷ್ಣ ಭಟ್ ಸ್ವಾಗತಿಸಿದರು. ಶಾಲಾ ಮುಖ್ಯೋಪಾಧ್ಯಾಯ ಸತ್ಯನಾರಾಯಣ ಶರ್ಮ ಪಂಜಿತ್ತಡ್ಕ ಅತಿಥಿಗಳನ್ನು ಗೌರವಿಸಿ ವಂದಿಸಿದರು.

ಅಗಲ್ಪಾಡಿ ದೇವಳದಲ್ಲಿ ಮಂಕುತಿಮ್ಮನ ಕಗ್ಗ 
ಅಗಲ್ಪಾಡಿ ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನದಲ್ಲಿ ಜರಗುತ್ತಿರುವ ವಿದ್ವಾನ್ ಜಿ.ಎಸ್. ನಟೇಶ್ ಶಿವಮೊಗ್ಗ ಅವರಿಂದ ಜರಗುತ್ತಿರುವ ಮಂಕುತಿಮ್ಮನ ಕಗ್ಗ ಉಪನ್ಯಾಸ ಕಾರ್ಯಕ್ರಮ ಜು.೧೯ ಸಮಾರೋಪಗೊಳ್ಳಲಿದೆ. ಅಂದು ಸಂಜೆ ೫.೩೦ರಿಂದ ಆರಂಭಗೊಂಡು ೭.೩೦ರ ತನಕ ಅವರು ಉಪನ್ಯಾಸ ನೀಡಲಿದ್ದಾರೆ. ಭಗವದ್ಬಕ್ತರು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಬೇಕೆಂದು ಸಂಬಂಧಪಟ್ಟವರು ತಿಳಿಸಿದ್ದಾರೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!