ಹೊಸದಿಗಂತ ಡಿಜಿಟಲ್ ಡೆಸ್ಕ್:
ಇವತ್ತಿನ ಭಾರತದಲ್ಲಿ ಮಹಿಳೆಯರು ತಮ್ಮ ಸಾಮರ್ಥ್ಯವನ್ನು ಸಂಪೂರ್ಣವಾಗಿ ಬಳಸಿಕೊಂಡು ಬೆಳೆಯಲು ಹೇರಳ ಅವಕಾಶಗಳಿವೆ ಎಂದು ಸಂಸದ ಹಾಗೂ ಖ್ಯಾತ ಹೃದಯ ಚಿಕಿತ್ಸಕ ಡಾ ಸಿ ಎನ್ ಮಂಜುನಾಥ್ ಹೇಳಿದ್ದಾರೆ.
ರಾಮನಗರದಲ್ಲಿ ನಡೆದ ‘ಮಹಿಳೆಯರ ನಡೆ ಅಭಿವೃದ್ಧಿಯ ಕಡೆ’ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಪ್ರಧಾನಿ ನರೇಂದ್ರ ಮೋದಿಯವರ ವಿಕಸಿತ ಭಾರತದ ಕನಸನ್ನು ನನಸಾಗಿಸುವಲ್ಲಿ ಮಹಿಳೆಯರ ಪಾತ್ರ ತುಂಬಾ ದೊಡ್ಡದು ಎಂದರು.
ಮಹಿಳೆಯರ ಅನುಕೂಲಕ್ಕೆ ಮತ್ತು ಅಭಿವೃದ್ಧಿಗಾಗಿ ಇರುವ ಕೇಂದ್ರ ಸರ್ಕಾರದ ಅನೇಕ ಯೋಜನೆಗಳನ್ನು ಅವರು ವಿವರಿಸಿದರು.
ಕಾರ್ಯಕ್ರಮವನ್ನು ಆಯೋಜಿಸಿದ್ದ ವಿ ಸೆಡ್ ವಿ ಹೆಡ್ ಸಂಸ್ಥೆಯ ಮುಖ್ಯಸ್ಥೆ ಡಾ ಪುಣ್ಯವತಿ ನಾಗರಾಜ್ ಅವರು ನಿಯಮಿತವಾಗಿ ಆರೋಗ್ಯ ತಪಾಸಣೆ ಮಾಡಿಸಿಕೊಳ್ಳುವುದರ ಮಹತ್ವ ಹಾಗೂ ಕ್ಯಾನ್ಸರ್ ರೋಗದ ಬಗ್ಗೆ ಅರಿವು ಮೂಡಿಸಿಕೊಳ್ಳಬೇಕಾದ ಅಗತ್ಯದ ಬಗ್ಗೆ ಮಾತಾಡಿದರು. ರಾಮನಗರದ ಶಾಂತಿನಿಕೇತನ ಸಮೂಹ ಶಿಕ್ಷಣ ಸಂಸ್ಥೆಗಳ ನಿರ್ದೇಶಕಿ ಸೌಮ್ಯ ಕುಮಾರಸ್ವಾಮಿ, ಬೆಂಗಳೂರಿನ ಎಸ್ ಎಸ್ ಎಂ ಇ ಸಂಸ್ಥೆಯ ಉಪಾಧ್ಯಕ್ಷೆ ಭುವನ ಸುರೇಶ್, ರಾಮನಗರದ ಶರತ್ ಮೆಮೋರಿಯಲ್ ಶಾಲೆಯ ಕಾರ್ಯದರ್ಶಿ ಎನ್ ರಾಜೇಶ್ವರಿ ಉಪಸ್ಥಿತರಿದ್ದರು.