ಹೊಸದಿಗಂತ ವರದಿ,ಹಾವೇರಿ:
ಸರ್ಕಾರಿ ಕರ್ತವ್ಯದಲ್ಲಿ ಹಲವು ಲೋಪಗಳ ಹಿನ್ನೆಲೆಯಲ್ಲಿ ಹಾವೇರಿ ತಾಲೂಕು ಪಂಚಾಯತ್ ಕಾರ್ಯನಿರ್ವಾಹಕ ಅಧಿಕಾರಿ ಭರತ್ ಹೆಗಡೆ ಅವರನ್ನು ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆಯ ಸರ್ಕಾರದ ಅಧೀನ ಕಾರ್ಯದರ್ಶಿ ಬಾಲಪ್ಪ ಅವರು ಸರ್ಕಾರಿ ಸೇವೆಯಿಂದ ಅಮಾನತು ಮಾಡಿ ಆದೇಶಿಸಿದ್ದಾರೆ.
ಹಾವೇರಿ ತಾಲೂಕ ಪಂಚಾಯಿತಿ ಕಾರ್ಯನಿರ್ವಾಹಕ ಅಧಿಕಾರಿ ಭರತ್ ಹೆಗಡೆ ಅವರನ್ನು ಆಡಳಿತಾತ್ಮಕ ಹಿತದೃಷ್ಠಿಯಿಂದ ದಾಂಡೇಲಿ ತಾಪಂ ಇಒ ಎಂದು ರಾಜ್ಯ ಸರ್ಕಾರ ವರ್ಗಾವಣೆ ಮಾಡಿ ಜು.೩೦ರಂದು ಬಿಡುಗಡೆ ಮಾಡಲಾಗಿತ್ತು. ಅವರ ಹುದ್ದೆಗೆ ಸವಣೂರ ತಾಪಂ ಇಓ ನವೀನ ಪ್ರಸಾದ ಅವರನ್ನು ಹೆಚ್ಚುವರಿ ಪ್ರಭಾರದ ಜವಾಬ್ದಾರಿ ನೀಡಿ ಆದೇಶಿಸಲಾಗಿತ್ತು.
ಆದರೆ ಭರತ್ ಹೆಗಡೆ ತಮ್ಮ ವರ್ಗಾವಣೆ ಆದೇಶಕ್ಕೆ ಕರ್ನಾಟಕ ಆಡಳಿತ ನ್ಯಾಯಮಂಡಳಿಯಿಂದ ತಡೆಯಾಜ್ಞೆ ತಂದು ಇದರ ಮಾಹಿತಿಯನ್ನು ಮೇಲಧಿಕಾರಿಗಳ ಗಮನಕ್ಕ ತರದೇ ಆ.೧ರಂದು ಮತ್ತೆ ಹಾವೇರಿ ತಾಪಂ ಇಒ ಹುದ್ದೆಗೆ ಸ್ವಯಂ ವರದಿ ಮಾಡಿಕೊಂಡಿದ್ದರು.
ಅಲ್ಲದೇ ಜಿಲ್ಲೆಯಲ್ಲಿ ಮಳೆಯಿಂದ ವಿವಿಧ ಹಾನಿ ಮತ್ತು ಸಮಸ್ಯೆಗಳು, ಪ್ರಕೃತಿ ವಿಕೋಪ ಸಂಭವಿಸಿದಾಗ್ಯೂ ಕೇಂದ್ರಸ್ಥಾನದಲ್ಲಿ ಇರದೇ ಇರುವುದರಿಂದ ಇದಕ್ಕೆ ಜಿಲ್ಲಾ ಉಸ್ತುವಾರಿ ಸಚಿವರು ವಿಷಾಧ ವ್ಯಕ್ತಪಡಿಸಿದ್ದರು.
ಅಲ್ಲದೆ ಈ ಹಿಂದೆ ಅಂದರೆ ೨೦೨೩ರ ನವೆಂಬರ್ ೭ರಂದು ನಡೆದ ಜಿಲ್ಲಾಮಟ್ಟದ ತ್ರೈ ಮಾಸಿಕ ಕೆಡಿಪಿ ಸಭೆಗೂ ಪೂರ್ವಾನುಮತಿ ಇಲ್ಲದೇ ಗೈರಾಗಿದ್ದರು. ಇದಕ್ಕೆ ಕಾರಣ ಕೇಳಿ ನೋಟೀಸ್ ನೀಡಿದಾಗ್ಯೂ, ಸಮಂಜನ ಉತ್ತರ ನೀಡಿಲ್ಲ. ಈ ಎಲ್ಲಾ ಕಾರಣಗಳನ್ನು ಪರಿಗಣಿಸಿ ಬೇಜವಾಬ್ದಾರಿ ವರ್ತನೆ, ಸರ್ಕಾರಿ ನೌಕರರಿಗೆ ತರವಲ್ಲದ ದುರ್ನಡತೆ ಎಸಗಿದ್ದರಿಂದ ಅವರ ಮೇಲೆ ಇಲಾಖಾ ವಿಚಾರಣೆ ಕಾಯ್ದಿರಿಸಿ ಸರ್ಕಾರಿ ಸೇವೆಯಿಂದ ಅಮಾನತು ಮಾಡಿ ಆದೇಶಿಸಿದ್ದಾರೆ.