ಹೊಸದಿಗಂತ ಡಿಜಿಟಲ್ ಡೆಸ್ಕ್:
ಸರ್ಕಾರ ಪ್ರಕಟಿಸಿರುವ ಕರ್ನಾಟಕ ವನ್ಯಜೀವಿ ಮಂಡಳಿ ನೇಮಕ ಪಟ್ಟಿಯಲ್ಲಿ ಮಂಡಳಿಯ ಸದಸ್ಯರನ್ನಾಗಿ ಬಹುತೇಕ ರಾಜಕಾರಣಿಗಳ ಮಕ್ಕಳನ್ನೇ ನೇಮಕ ಮಾಡಲಾಗಿರುವ ಬಗ್ಗೆ ರಾಷ್ಟ್ರೀಯ ಪರಿಸರ ಸಂರಕ್ಷಣಾ ಒಕ್ಕೂಟ (ಎನ್ ಇಸಿಎಫ್) ತೀವ್ರ ಆಕ್ಷೇಪ ವ್ಯಕ್ತಪಡಿಸಿದ್ದು, ಈ ಬಗ್ಗೆ ಅರ್ಹರ ಮರು ನೇಮಕ ಮಾಡಲು ರಾಜ್ಯಪಾಲರಿಗೆ ಪತ್ರ ಬರೆದು ಆಗ್ರಹಿಸಿದೆ.
ಮಂಡಳಿಯಲ್ಲಿ ಒಬ್ಬಿಬ್ಬರು ವನ್ಯಜೀವಿ, ಪರಿಸರ ಸಂಬಂಧಿ ಪರಿಣಿತರನ್ನು ಹೊರತುಪಡಿಸಿದರೆ ಉಳಿದವರೆಲ್ಲ ಬಹುತೇಕ ಆಡಳಿತ ಪಕ್ಷದ ಬಂಧು-ಬಾಂಧವರೇ ಇದ್ದಾರೆ. ಆ ಪೈಕಿ ಬಹುತೇಕ ಮಂದಿಗೆ ವನ್ಯಜೀವಿ ಕ್ಷೇತ್ರದಲ್ಲಿ ಕೆಲಸ ಮಾಡಿದ, ಅಧ್ಯಯನ, ಸಂಶೋಧನೆ ಮಾಡಿದ ಅನುಭವವಾಗಲೀ, ಅರಿವಾಗಲಿ ಇಲ್ಲ. ಇದು ಸರ್ಕಾರದ ಸಂಪೂರ್ಣ ನಿರ್ಲಕ್ಷ್ಯವಾಗಿದೆ. ಈ ನಡೆಯಿಂದ ಸಮಾಜ, ಪ್ರಕೃತಿ ಮೇಲೆ ವ್ಯತಿರಿಕ್ತ ಪರಿಣಾಮ ಬೀರುವ ಸಾಧ್ಯತೆಯಿದೆ ಎಂದು ಒಕ್ಕೂಟ ಕಳವಳ ವ್ಯಕ್ತಪಡಿಸಿದೆ.
ಈ ಬಗ್ಗೆ ತಾವು ತಕ್ಷಣ ಮಧ್ಯಪ್ರವೇಶಿಸಿ ಈ ಕೂಡಲೇ ನೇಮಕ ರದ್ದು ಮಾಡಬೇಕು, ಸದಸ್ಯತ್ವಕ್ಕೆ ಅರ್ಹರಿರುವವರಿಗೆ ಮಂಡಳಿಯಲ್ಲಿ ಅವಕಾಶ ನೀಡಬೇಕು ಎಂದು ರಾಷ್ಟ್ರೀಯ ಪರಿಸರ ಸಂರಕ್ಷಣಾ ಒಕ್ಕೂಟದ ಪರವಾಗಿ ಪ್ರಧಾನ ಕಾರ್ಯದರ್ಶಿ ಶಶಿಧರ್ ಶೆಟ್ಟಿ ಅವರು ಪತ್ರದ ಮೂಲಕ ರಾಜ್ಯಪಾಲರಿಗೆ ಮನವಿ ಮಾಡಿ ಆಗ್ರಹಿಸಿದ್ದಾರೆ.