ಹೊಸದಿಗಂತ ಡಿಜಿಟಲ್ ಡೆಸ್ಕ್:
“ನನ್ನ ಕುತ್ತಿಗೆ ಸೀಳಿದರೂ ನಾನು ಹಿಂದುತ್ವವನ್ನು ಬಿಟ್ಟು ಬೇರೆಡೆ ಹೋಗುವ ಪ್ರಶ್ನೆಯೇ ಇಲ್ಲ” ಎಂದು ಬಿಜೆಪಿಯಿಂದ ಉಚ್ಚಾಟನೆಗೊಂಡಿರುವ ಹಿರಿಯ ನಾಯಕ ಕೆ.ಎಸ್. ಈಶ್ವರಪ್ಪ ಪುನರುಚ್ಚರಿಸಿದ್ದಾರೆ.
ದಾವಣಗೆರೆಯ ಹರಿಹರದ ಪಂಚಮಸಾಲಿ ಪೀಠಕ್ಕೆ ಭೇಟಿ ನೀಡಿದ ಸಂದರ್ಭದಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಪಕ್ಷಕ್ಕೆ ಮರಳುವ ಕುರಿತು ಮಹತ್ವದ ಸುಳಿವು ನೀಡಿದ್ದಾರೆ. “ಬಿಜೆಪಿಗೆ ಮರಳಿ ಎಂದು ಕಾರ್ಯಕರ್ತರು ನನ್ನ ಮೇಲೆ ತೀವ್ರ ಒತ್ತಡ ಹೇರುತ್ತಿದ್ದಾರೆ. ಪಕ್ಷದಲ್ಲಿ ಆಂತರಿಕ ಬದಲಾವಣೆ ತರಬೇಕೆಂಬ ಉದ್ದೇಶದಿಂದ ನಾನು ಹೊರಬಂದಿದ್ದೆ. ಆ ಬದಲಾವಣೆ ಇವತ್ತಲ್ಲದಿದ್ದರೂ ನಾಳೆ ಖಂಡಿತಾ ಆಗಲಿದೆ” ಎಂದು ವಿಶ್ವಾಸ ವ್ಯಕ್ತಪಡಿಸಿದರು.
ಪಕ್ಷದೊಳಗಿನ ಹಾಲಿ ಸ್ಥಿತಿಗತಿಯ ಬಗ್ಗೆ ಬೇಸರ ವ್ಯಕ್ತಪಡಿಸಿದ ಅವರು, “ಪಕ್ಷದ ನಿಷ್ಠಾವಂತ ಕಾರ್ಯಕರ್ತರು ಸಾಕಷ್ಟು ನೋವಿನಲ್ಲಿದ್ದಾರೆ. ಈ ನೋವು ನನ್ನ ಮನಸ್ಸಿನಲ್ಲೂ ಇದೆ, ಬಸನಗೌಡ ಪಾಟೀಲ್ ಯತ್ನಾಳ್ ಅವರ ಮನಸ್ಸಿನಲ್ಲೂ ಇದೆ” ಎನ್ನುವ ಮೂಲಕ ಪಕ್ಷದೊಳಗಿನ ಭಿನ್ನಮತೀಯ ಬಣದ ಅಸಮಾಧಾನವನ್ನು ಹೊರಹಾಕಿದರು. ಇದೇ ವೇಳೆ, ಸದ್ಯ ಬಿಜೆಪಿ ಹಮ್ಮಿಕೊಂಡಿರುವ ಪಾದಯಾತ್ರೆಗೂ ನನಗೂ ಯಾವುದೇ ಸಂಬಂಧವಿಲ್ಲ ಎಂದು ಸ್ಪಷ್ಟಪಡಿಸುವ ಮೂಲಕ ಅವರು ತಮ್ಮ ನಿಲುವನ್ನು ಕಾಯ್ದುಕೊಂಡಿದ್ದಾರೆ.


