ರಾಜ್ಯಪಾಲರೇ ಅರ್ಜಿದಾರರ ವಿಚಾರಣೆ ನಡೆಸುವುದಾದರೆ ಕೋರ್ಟ್ ಯಾಕೆ ಬೇಕು? : ರಾಜಶೇಖರ್ ಹಿಟ್ನಾಳ್

ದಿಗಂತ ವರದಿ ವಿಜಯನಗರ:

ಮುಡಾ ಹಗರಣಕ್ಕೆ ಸಂಬಂಧಿಸಿ ಪ್ರಾಸಿಕ್ಯೂಷನ್ ಗೆ ರಾಜ್ಯಪಾಲರು ಅನುಮತಿ ನೀಡುವುದಲ್ಲದೇ, ರಾಜ್ಯಪಾಲರೇ ಅರ್ಜಿದಾರರ ವಿಚಾರಣೆಯೂ ನಡೆಸುವುದಾದರೆ ಕೋರ್ಟ್ ಯಾಕೆ‌ಬೇಕು. ರಾಜ್ಯಪಾಲರು ವಿಚಾರಣೆ ನಡೆಸಬಹುದು ಎಂಬುದು ಯಾವ ಕಾನೂನಿನಲ್ಲಿದೆ ಎಂದು ಕೊಪ್ಪಳ ಸಂಸದ ರಾಜಶೇಖರ್ ಹಿಟ್ನಾಳ ಪ್ರಶ್ನಿಸಿದರು.

ಹೊಸಪೇಟೆ ಸಮೀಪದ ತುಂಗಭದ್ರಾ ಜಲಾಶಯ ಸಮೀಪದಲ್ಲಿ ಶನಿವಾರ ಸುದ್ದಿಗಾರರೊಂದಿಗೆ ಮಾತನಾಡಿ ಅವರು, ರಾಜ್ಯಪಾಲರು ಕಾನೂನಾತ್ಮಕವಾಗಿ‌ ನಡೆದುಕೊಳ್ಳುತ್ತಿಲ್ಲ. ಮುಡಾ ಆರೋಪ ಬೇಸ್ ಲೆಸ್ ಎಂಬುದು ಸಾಮಾನ್ಯರಿಗೂ ಗೊತ್ತಿದೆ. ಆದರೂ, ಪ್ರಾಸಿಕ್ಯೂಷನ್ ಗೆ ಅನುಮತಿ ನೀಡಿ, ಬಿಜೆಪಿಯ ಕೈಗೊಂಬೆಯಂತೆ ನಡೆದು ಕೊಳ್ಳುತ್ತಿದ್ದಾರೆ.‌ ರಾಜಭವನ ದುರುಪಯೋಗ ಆಗುತ್ತಿದೆ‌‌ ಎಂದು ಅಸಮಾಧಾನ ವ್ಯಕ್ತಪಡಿಸಿದರು.

ಮುಖ್ಯಮಂತ್ರಿ ವಿರುದ್ಧ ಪ್ರಾಸಿಕ್ಯೂಷನ್ ಗೆ ಅನುಮತಿ ನೀಡಿದ್ದನ್ನು ಪ್ರಶ್ನಿಸಿ ಕಾನೂನು ಹೋರಾಟ‌ ನಡೆಸಲಾಗುತ್ತದೆ.‌ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಮಾರ್ಗದರ್ಶನದಲ್ಲಿ ರಾಜ್ಯದ ಎಲ್ಲ‌‌ ಕಾಂಗ್ರೆಸ್ ಸಂಸದರು ಸೇರಿ ‌ಸಂಸತ್ ಭವನ‌ ಎದುರು ಧರಣಿ ನಡೆಸುವುದಾಗಿ ತಿಳಿಸಿದರು.

ಮುಡಾ ವಿಚಾರವಾಗಿ ರಾಜ್ಯಪಾಲರು ಪ್ರಾಸಿಕ್ಯೂಷನ್ ಗೆ ಅನುಮತಿ ನೀಡಿದ್ದಕ್ಕೆ ಸಿಎಂ‌ ರಾಜೀನಾಮೆ ನೀಡುವ ಅಗತ್ಯವಿಲ್ಲ.‌ ಕರ್ನಾಟಕ ಸೇರಿದಂತೆ ದೇಶದ ಇತರೆ ರಾಜ್ಯಗಳಲ್ಲಿ ಅಧಿಕಾರದಲ್ಲಿರುವ ಬಿಜೆಪಿಯೇತರ ಪಕ್ಷಗಳ ಸರ್ಕಾರಗಳ‌ನ್ನು ಅಸ್ಥಿರಗೊಳಿಸಲು ಬಿಜೆಪಿ ನಿರಂತರ‌ ಪ್ರಯತ್ನ‌ ನಡೆಸುತ್ತಿದೆ ಎಂದು ಸಂಸದ ರಾಜಶೇಖರ್ ಹಿಟ್ನಾಳ್ ಗಂಭೀರ ಆರೋಪಿಸಿದರು.

ಈ‌ ಸಂದರ್ಭದಲ್ಲಿ ಕಾಂಗ್ರೆಸ್ ಮುಖಂಡ ಹಟ್ಟಿ ಭರಮಪ್ಪ, ಉಮೇಶ ಮಂಗಳೂರು ಮತ್ತಿತರರು ಇದ್ದರು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!