ದಿಗಂತ ವರದಿ ಹಾಸನ :
ಚಾಲಕನ ನಿಯಂತ್ರಣ ತಪ್ಪಿದ ಲಾರಿ ಕಂದಕಕ್ಕೆ ಬಿದ್ದು ಲಾರಿ ಚಾಲಕ ಸೇರಿ ಮೂವರಿಗೆ ಗಾಯವಾಗಿರುವ ಘಟನೆ ಜಿಲ್ಲೆಯ ಸಕಲೇಶಪುರ ತಾಲ್ಲೂಕಿನ, ಶಿರಾಡಿಘಾಟ್ ರಸ್ತೆಯ, ದೋಣಿಗಲ್ ಬಳಿ ನಡೆದಿದೆ.
ಬೆಂಗಳೂರಿನಿಂದ ಮಂಗಳೂರು ಕಡೆಗೆ ಸರಕು ತುಂಬಿಕೊಂಡು ತೆರಳುತ್ತಿದ್ದ ಲಾರಿ, ಕೆಲ ದಿನಗಳ ಹಿಂದೆ ಭಾರಿ ಮಳೆಯಿಂದ ನೀರು ಹರಿದು ಹೆದ್ದಾರಿ ಪಕ್ಕದಲ್ಲಿ ಸೃಷ್ಟಿಯಾಗಿದ್ದ ಬೃಹತ್ ಗುಂಡಿಗೆ ತಡರಾತ್ರಿ ತಿರುವಿನಲ್ಲಿ ಚಾಲಕನಿಗೆ ನಿಯಂತ್ರಣ ಸಿಗದೆ ಕಂದಕಕ್ಕೆ ಲಾರಿ ಪಲ್ಟಿಯಾಗಿದೆ.
ಮಾಹಿತಿ ತಿಳಿದು ಸ್ಥಳಕ್ಕೆ ಆಗಮಿಸಿದ ಅಗ್ನಿಶಾಮಕ ದಳದ ಸಿಬ್ಬಂದಿಗಳು ಲಾರಿಯಲ್ಲಿ ಸಿಲುಕಿದ್ದ ಕುಣಿಗಲ್ ಮೂಲದ ಲಾರಿ ಚಾಲಕ ಜಾಫರ್, ಸಿಮ್ರಾನ್ ಮತ್ತು ಹತಾಹುಲ್ಲರನ್ನು ರಕ್ಷಿಸಿದ್ದಾರೆ. ಗಾಯಾಳುಗಳು ಸಕಲೇಶಪುರ ಕ್ರಾಫರ್ಡ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದು ಸ್ಥಳಕ್ಕೆ ಸಕಲೇಶಪುರ ನಗರ ಪೊಲೀಸ್ ಠಾಣೆ ಪೊಲೀಸರು ಭೇಟಿ, ಪರಿಶೀಲನೆ ನಡೆಸಿದ್ದಾರೆ.