ಹೊಸದಿಗಂತ ವರದಿ ಮಂಡ್ಯ:
ದೇಶಕ್ಕೆ ಸ್ವಾತಂತ್ರ್ಯ ತಂದುಕೊಟ್ಟ ಮಹಾತ್ಮಗಾಂಧಿ ಅವರ ಎದೆಗೆ ಗೋಡ್ಸೆ ಗುಂಡಿಕ್ಕಿ ಕೊಂದರೆ, ಗಾಂಧಿ ಹೆಸರಿನಲ್ಲಿರುವ ಯೋಜನೆಗಳನ್ನು ಅಳಿಸಿಹಾಕುವ ಮೂಲಕ ಬಿಜೆಪಿ ಪರೋಕ್ಷವಾಗಿ ಅವರನ್ನು ಹತ್ಯೆ ಮಾಡುತ್ತಿದೆ ಎಂದು ಕೃಷಿ ಮತ್ತು ಜಿಲ್ಲಾ ಉಸ್ತುವಾರಿ ಸಚಿವ ಎನ್.ಚಲುವರಾಯಸ್ವಾಮಿ ಟೀಕಿಸಿದರು.
ನಗರದ ಪತ್ರಕರ್ತರ ಭವನದಲ್ಲಿ ಸುದ್ದಿಗೋಷ್ಠಿಯನ್ನುದ್ದೇಶಿಸಿ ಮಾತನಾಡಿ, ಭಾರತಕ್ಕೆ ಸ್ವಾತಂತ್ರ್ಯ ಗಳಿಸಿಕೊಟ್ಟ ಮಹಾತ್ಮಗಾಂಧಿಯನ್ನು ವಿಶ್ವವೇ ಗೌರವಿಸುತ್ತಿದೆ. ಆದರೆ, ಬಿಜೆಪಿ ಅವರ ಹೆಸರಿನಲ್ಲಿರುವ 30 ಯೋಜನೆಗಳಿಗೆ ತಿಲಾಂಜಲಿ ಹಾಡಿ ಅವರ ಹೆಸರನ್ನೇ ಸರ್ವನಾಶ ಮಾಡುತ್ತಿದೆ ಎಂದು ಕಟುವಾಗಿ ಹೇಳಿದರು.
ಮನರೇಗಾ ಯೋಜನೆಯನ್ನು ಬಿಜೆಪಿ ಸರ್ಕಾರ ಹಿಂದೊಮ್ಮೆ ನಿಷೇಧಿಸಲು ಯತ್ನಿಸಿತ್ತು. ನಂತರ ಸಂಸತ್ನಲ್ಲಿ ಗಲಾಟೆಯಾಗಿದ್ದರಿಂದ ಅದನ್ನು ಮುಂದೂಡಿದ್ದರು. ಇದೀಗ ಇಡೀ ಕಾಯ್ದೆಯನ್ನೇ ಸಮಗ್ರವಾಗಿ ಬದಲಾವಣೆ ಮಾಡಿ ಅದರ ಸ್ವರೂಪವನ್ನೇ ಬದಲಿಸಿದ್ದಾರೆ. ಈ ವಿಷಯವಾಗಿ ರಾಜ್ಯಗಳ ಅಭಿಪ್ರಾಯ ಸಂಗ್ರಹಿಸಲಿಲ್ಲ, ಗ್ರಾಪಂಗಳ ಸಲಹೆಗಳನ್ನು ಕೇಳಲಿಲ್ಲ, ಜನರು, ಜನಪ್ರತಿನಿಧಿಗಳೊಂದಿಗೆ ಚರ್ಚಿಸಲಿಲ್ಲ, ಸದನದಲ್ಲೂ ಚರ್ಚೆಗೆ ಸುದೀರ್ಘ ಅವಕಾಶ ನೀಡದೆ ತರಾತುರಿಯಲ್ಲಿ ಜಾರಿಗೆ ತಂದಿದ್ದಾರೆ ಎಂದು ಆರೋಪಿಸಿದರು.


