ಹೊಸದಿಗಂತ ಡಿಜಿಟಲ್ ಡೆಸ್ಕ್:
ದೇಶದ ಜೈಲುಗಳಲ್ಲಿ ನಡೆಯುತ್ತಿರುವ ಜಾತಿ ಆಧಾರಿತ ತಾರತಮ್ಯವನ್ನು ಸಹಿಸಲಾಗುವುದಿಲ್ಲ. ಒಂದು ವೇಳೆ ಜಾತಿ ಆಧಾರಿತ ತಾರತಮ್ಯ ಜೈಲುಗಳಲ್ಲಿ ನಡೆದರೇ ಆಯಾ ರಾಜ್ಯಗಳೇ ಹೊಣೆ ಎಂದು ಸುಪ್ರೀಂ ಕೋರ್ಟ್ ಕಟ್ಟುನಿಟ್ಟಿನ ಆದೇಶ ನೀಡಿದೆ.
ಜೈಲು ಬ್ಯಾರಕ್ಗಳಲ್ಲಿನ ಜಾತಿ ಆಧಾರಿತ ತಾರತಮ್ಯದ ಬಗ್ಗೆ ವ್ಯಾಪಕವಾಗಿ ವರದಿ ಮಾಡಿದ ಬಳಿಕ ಪತ್ರಕರ್ತೆ ಸುಕನ್ಯಾ ಶಾಂತಾ ಅವರು ಅರ್ಜಿ ಸಲ್ಲಿಸಿದ್ದರು. ಹಲವಾರು ರಾಜ್ಯಗಳಲ್ಲಿನ ಜೈಲು ಕೈಪಿಡಿಗಳು ಜಾತಿ ತಾರತಮ್ಯವನ್ನು ಪ್ರೋತ್ಸಾಹಿಸುತ್ತವೆ ಎಂದು ಅರ್ಜಿಯಲ್ಲಿ ಹೇಳಲಾಗಿತ್ತು. ಉತ್ತರ ಪ್ರದೇಶ, ಪಶ್ಚಿಮ ಬಂಗಾಳ, ಮಧ್ಯಪ್ರದೇಶ, ಆಂಧ್ರಪ್ರದೇಶ, ತೆಲಂಗಾಣ, ಪಂಜಾಬ್, ಒಡಿಶಾ, ಜಾರ್ಖಂಡ್, ಕೇರಳ, ತಮಿಳುನಾಡು ಮತ್ತು ಮಹಾರಾಷ್ಟ್ರದ ಜೈಲು ಕೈಪಿಡಿಗಳಲ್ಲಿ ಕಂಡುಬರುವ ತಾರತಮ್ಯದ ನಿಬಂಧನೆಗಳನ್ನು ರದ್ದುಗೊಳಿಸುವಂತೆ ಅರ್ಜಿಯಲ್ಲಿ ಕೋರಲಾಗಿತ್ತು. ಈ ಅರ್ಜಿ ಮೇರೆಗೆ ಕೋರ್ಟ್ ವಿಚಾರಣೆ ನಡೆಸಿತ್ತು.
ಈ ಕುರಿತು ವಿಚಾರಣೆ ನಡೆಸಿದ ಸಿಜೆಐ ಡಿ.ವೈ ಚಂದ್ರಚೂಡ್ ನೇತೃತ್ವದ ತ್ರಿಸದಸ್ಯ ಪೀಠ, ಕೆಳವರ್ಗದವರಿಗೆ ಸ್ವಚ್ಛತೆ ಮತ್ತು ಕಸಗುಡಿಸುವ ಕಾರ್ಯಗಳನ್ನು ವಹಿಸುವ ಮೂಲಕ ನೇರವಾಗಿ ತಾರತಮ್ಯವನ್ನುಂಟುಮಾಡುತ್ತದೆ . ಉನ್ನತ ಜಾತಿಯವರಿಗೆ ಅಡುಗೆ ಕೆಲಸ ನಿಯೋಜಿಸುವ ಆರೋಪ ಕೇಳಿಬಂದಿದೆ. ಇದು ಆರ್ಟಿಕಲ್-15ರ ಉಲ್ಲಂಘನೆಯಾಗಿದೆ ಎಂದು ಹೇಳಿದೆ .
ಜೈಲುಗಳಲ್ಲಿ ಇಂತಹ ಆಚರಣೆ ತಡೆಯಲು ಜೈಲು ಕೈಪಿಡಿ ನಿಬಂಧನೆಗಳನ್ನು ಪರಿಷ್ಕರಿಸವ ಅಗತ್ಯವಿದೆ. ಈ ನಿಟ್ಟಿನಲ್ಲಿ ಎಲ್ಲಾ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳು ಜೈಲು ಕೈಪಿಡಿ ನಿಬಂಧನೆಗಳನ್ನು ಬದಲಿಸಬೇಕು. ಅಪರಾಧಿ ಅಥವಾ ಅಂಡರ್ ಟ್ರಯಲ್ ರಿಜಿಸ್ಟ್ರಾರ್ಗಳಲ್ಲಿನ ಜಾತಿ ಕಾಲಂ ಅನ್ನು ತೆಗೆದು ಹಾಕಬೇಕು ಎಂದು ಹೇಳಿದೆ . ಈ ತೀರ್ಪಿನ ಪಾಲನೆ ವರದಿಯನ್ನು ರಾಜ್ಯಗಳು ಸಲ್ಲಿಸಬೇಕು ಎಂದು ಕೋರ್ಟ್ ಸೂಚನೆ ನೀಡಿದೆ.
ಕೈದಿಗಳನ್ನು ಮಾನವೀಯವಾಗಿ ನಡೆಸಿಕೊಳ್ಳಬೇಕು ಮತ್ತು ಜೈಲು ವ್ಯವಸ್ಥೆಗೆ ಕೈದಿಗಳ ಮಾನಸಿಕ ಮತ್ತು ದೈಹಿಕ ಸ್ಥಿತಿಯ ಬಗ್ಗೆ ತಿಳಿದಿರಬೇಕು ಎಂದು ಸಂವಿಧಾನವು ಆದೇಶಿಸುತ್ತದೆ. ಜೈಲು ಶಿಕ್ಷೆಗೆ ಒಳಗಾಗುವ ಯಾವುದೇ ವ್ಯಕ್ತಿಯು ಅವನ ಜಾತಿ ಆಧಾರದ ಕೆಲಸಗಳನ್ನು ಮಾಡದ ಹೊರತು ಕೀಳು ಕೆಲಸವನ್ನು ಮಾಡುವುದಿಲ್ಲ ಎನ್ನುವುದಿಲ್ಲ ಎನ್ನುವ ಅಂಶವನ್ನು ಗಮಸಿತು. ಅಂತೆಯೇ ಹರಿ ಅಥವಾ ಚಂಡಾಲ್ ಜಾತಿಗಳಿಂದ ಕಸಗುಡಿಸುವವರನ್ನು ಆಯ್ಕೆ ಮಾಡಬೇಕು ಎಂದು ಹೇಳುವ ಜೈಲು ಕೈಪಿಡಿ ನಿಯಮಗಳನ್ನು ಕೋರ್ಟ್ ಟೀಕಿಸಿತು.
ಜಾತಿ ಇತ್ಯಾದಿಗಳ ಆಧಾರದ ಮೇಲೆ ಕಾರ್ಮಿಕ ನಿಯೋಜನೆಯ ಅನುಮತಿಸಲಾಗುವುದಿಲ್ಲ.ಒಳಚರಂಡಿ ಟ್ಯಾಂಕರ್ಗಳನ್ನು ಶುಚಿಗೊಳಿಸುವಂತಹ ಅಪಾಯಕಾರಿ ಕೆಲಸಗಳನ್ನು ಯಾವ ಕೈದಿಗಳೂ ಮಾಡಬಾರದು ಎಂದು ಕೋರ್ಟ್ ತನ್ನ ಆದೇಶದಲ್ಲಿ ಹೇಳಿದೆ.