ಹೊಸದಿಗಂತ ವರದಿ,ಆಲೂರು :
ಚಾಲಕನ ನಿಯಂತ್ರಣ ತಪ್ಪಿ ಕೀಯಾ ಕಾರೊಂದು ಕೆರೆಗೆ ಉರುಳಿ, ಅದೃಷ್ಠವಸತ್ ಮೂವರು ಪ್ರಾಣಪಾಯದಿಂದ ಪಾರಾಗಿರುವ ಘಟನೆ ತಾಲೂಕಿನ ಮಠದ ಕೊಪ್ಪಲಿನ ರಸ್ತೆ ಸಮೀಪದ ಕೆರೆ ಬಳಿ ಶುಕ್ರವಾರ ನಡೆದಿದೆ.
ತಾಲೂಕಿನ ಮಠದಕೊಪ್ಪಲಿನಿಂದ ಮಗ್ಗೆಗೆ ಕಾರಿನಲ್ಲಿ ಮೂವರು ತೆರಳುತಿದ್ದ ವೇಳೆ ರಸ್ತೆಯ ಕೆರೆಯ ಸಮೀಪ ಚಾಲಕನ ನಿಯಂತ್ರಣ ತಪ್ಪಿ ಕಾರು ಕೆರೆಗೆ ಉರುಳಿ ಬಿದ್ದಿದೆ. ಕಾರಿನಲ್ಲಿದ್ದ ಚಾಲಕ ಸುಬ್ಬಾಸ್ ರಾಯಪ್ಪ, ಮತ್ತು ಜಯಪ್ರಕಾಶ್ ಸ್ಟಾನಿ, ಅನಿಲ್ ಪಾಯಿಸ್ ಈ ಮೂವರು ಕಾರಿನ ಡೋರಿನ ಕಿಟಿಕಿ ತಗೆದು ಹೊರಬಂದಿದ್ದಾರೆ. ಕಾರಿನಲ್ಲಿ ಹೆಚ್ಚಿನ ಪ್ರಯಾಣಿಕರು ಇಲ್ಲದ ಕಾರಣ ದೊಡ್ಡ ದುರಂತವೊಂದು ತಪ್ಪಿದಂತಾಗಿದೆ. ಈ ವೇಳೆ ಸ್ಥಳೀಯರು ಆಗಮಿಸಿ ರಕ್ಷಣೆ ಮುಂದಾಗಿದ್ದಾರೆ.
ಕಳೆದೆರೆಡು ತಿಂಗಳಲ್ಲಿ ಇಂತಹ ಮೂರು ಘಟನೆಗಳು ಸಂಭವಿಸಿದ್ದು, ರಸ್ತೆಗೆ ತಡೆಗೋಡೆ ಇಲ್ಲದಿರುವುದೇ ಅಪಘಾತಕ್ಕೆ ಮುಖ್ಯ ಕಾರಣ. ಕೆರೆ ಏರಿ ಮೇಲೆ ತಡೆಗೋಡೆ ಇಲ್ಲದೇ ಪ್ರತಿನಿತ್ಯ ಅಪಘಾತಗಳು ಸಂಭವಿಸುತ್ತಿರುವ ಬಗ್ಗೆ ಹಲವು ಬಾರಿ ಸಂಬಂಧಪಟ್ಟ ಅಧಿಕಾರಿಗಳಿಗೆ ಸ್ಥಳೀಯ ಶಾಸಕರಿಗೆ ಮನವಿ ಮಾಡಿದರು ಯಾವುದೇ ಪ್ರಯೋಜನವಾಗಿಲ್ಲ. ಇನ್ನಷ್ಟು ಅಪಘಾತಗಳು ಸಂಭವಿಸುವ ಮುನ್ನ ಸಂಬಂಧಪಟ್ಟ ಇಲಾಖೆ ತಕ್ಷಣ ತಡೆಗೋಡೆ ನಿರ್ಮಿಸಬೇಕು ಎಂದು ಸ್ಥಳೀಯರು ಒತ್ತಾಯಿಸಿದ್ದಾರೆ.