ಹೊಸದಿಗಂತ ಡಿಜಿಟಲ್ ಡೆಸ್ಕ್:
ವಿವಾದಿತ ಕೇಂದ್ರ ಶ್ರೀ ಗುರು ದತ್ತಾತ್ರೇಯ ಬಾಬಾ ಬುಡನ್ ಸ್ವಾಮಿ ದರ್ಗಾ ಸಂಪೂರ್ಣ ಹಿಂದೂ ಪೀಠಕ್ಕಾಗಿ ಆಗ್ರಹಿಸಿ ಶ್ರೀರಾಮ ಸೇನೆ ನಡೆಸುವ ದತ್ತಮಾಲಾ ಅಭಿಯಾನಕ್ಕೆ ಸಿದ್ಧತೆ ಆರಂಭವಾಗಿದೆ. ಸರ್ಕಾರದ ಮುಂದೆ ಇಸ್ಲಾಂ ಮುಕ್ತ ದತ್ತಪೀಠಕ್ಕೆ ಶ್ರೀರಾಮ ಸೇನೆ ಬೇಡಿಕೆ ಇಟ್ಟಿದೆ.
ಚಿಕ್ಕಮಗಳೂರು ತಾಲೂಕಿನ ಚಂದ್ರದ್ರೋಣ ಪರ್ವತದ ಸಾಲಿನಲ್ಲಿರುವ ಇನಾಂ ದತ್ತಾತ್ರೇಯ ಬಾಬಾ ಬುಡನ್ ಸ್ವಾಮಿ ದರ್ಗಾ ಸಂಪೂರ್ಣ ಹಿಂದೂ ಪೀಠಕ್ಕಾಗಿ ಆಗ್ರಹಿಸಿ ಕಳೆದ 20 ವರ್ಷಗಳಿಂದ ಶ್ರೀರಾಮ ಸೇನೆ ನಡೆಸುತ್ತಿರುವ ದತ್ತಮಾಲಾ ಅಭಿಯಾನಕ್ಕೆ ದಿನಗಣನೆ ಆರಂಭವಾಗಿದೆ. ನವೆಂಬರ್ 4 ರಿಂದ 10 ರವರೆಗೂ 6 ದಿನಗಳ ಕಾಲ ದತ್ತಮಾಲಾ ಅಭಿಯಾನ ನಡೆಯಲಿದೆ. ನವೆಂಬರ್ 4 ರಂದು ರಾಜ್ಯಾದ್ಯಂತ ಸಾವಿರಾರು ಶ್ರೀರಾಮ ಸೇನೆ ಕಾರ್ಯಕರ್ತರು ದತ್ತಮಾಲಾ ಧಾರಣೆ ಮಾಡಲಿದ್ದಾರೆ.
ದತ್ತಮಾಲಾ ಅಭಿಯಾನದ ಕೊನೆಯ ದಿನವಾದ ನವೆಂಬರ್ 10 ರಂದು ಚಿಕ್ಕಮಗಳೂರು ನಗರದಲ್ಲಿ ಧರ್ಮ ಸಭೆ, ಶೋಭಾಯಾತ್ರೆ ಬಳಿಕ ಇನಾಂ ದತ್ತಾತ್ರೇಯ ಬಾಬಾ ಬುಡನ್ ಸ್ವಾಮಿ ದರ್ಗಾಕ್ಕೆ ತೆರಳಿ ಹೋಮ, ಪೂಜೆ ನರವೇರಿಸಲಿದ್ದಾರೆ. ಈ ಬಾರಿ ಸರ್ಕಾರದ ಮುಂದೆ ವಿವಿಧ ಬೇಡಿಕೆ ಮುಂದಿಟ್ಟಿರುವ ಶ್ರೀರಾಮ ಸೇನೆ, ಇನಾಂ ದತ್ತಾತ್ರೇಯ ಬಾಬಾ ಬುಡನ್ ಸ್ವಾಮಿ ದರ್ಗಾದ ಆವರಣದಲ್ಲಿರುವ ಗೋರಿಗಳನ್ನ ನಾಗೇನಹಳ್ಳಿ ದರ್ಗಾಕ್ಕೆ ಸ್ಥಳಾಂತರ ಮಾಡಬೇಕು. ಇಸ್ಲಾಂ ಮುಕ್ತ ದತ್ತಪೀಠವನ್ನು ಹಿಂದೂಗಳಿಗೆ ನೀಡುವಂತೆ ಆಗ್ರಹಿಸಿದೆ.