ಹೊಸದಿಗಂತ ವರದಿ,ಕಲಬುರಗಿ :
ಹರಿಯಾಣ ವಿಧಾನಸಭೆ ಚುನಾವಣೆಯಲ್ಲಿ ಭಾರತೀಯ ಜನತಾ ಪಕ್ಷದ ಹ್ಯಾಟ್ರಿಕ್ ಗೆಲುವು,ಜಮ್ಮು ಕಾಶ್ಮೀರದಲ್ಲಿ ಬಿಜೆಪಿ ಸ್ಥಾನಗಳ ವೃದ್ಧಿಯಾಗಿದ್ದು, ದೇಶದಲ್ಲಿ ವಿಕಸಿತ ಭಾರತದ ಪ್ರಧಾನಿ ನರೇಂದ್ರ ಮೋದಿ ಅವರ ದೂರದೃಷ್ಟಿಯ ಯೋಜನೆಗಳಿಗೆ ಸಿಕ್ಕ ಜನ ಬೆಂಬಲಕ್ಕೆ ಸಾಕ್ಷಿಯಾಗಿದೆ ಎಂದು ಬಿಜೆಪಿ ಮಹಾನಗರ ಜಿಲ್ಲಾಧ್ಯಕ್ಷ ಚಂದು ಪಾಟೀಲ್ ಹೇಳಿದರು.
ಹರಿಯಾಣದಲ್ಲಿ ಬಿಜೆಪಿ ಸೋಲು ನಿಶ್ಚಿತ ಎಂದು ಜನರನ್ನು ಮರಳು ಮಾಡಲು ಯತ್ನಿಸಿದ ಕಾಂಗ್ರೆಸ್ ಹೀನಾಯ ಸೋಲು ಕಂಡಿದ್ದು, ಹರಿಯಾಣದ ಜನತೆ ಬಿಜೆಪಿಯ ಅಭಿವೃದ್ಧಿಗೆ ಬೆಂಬಲ ನೀಡಿರುವುದು ಈ ಫಲಿತಾಂಶವೂ ಸ್ಪಷ್ಟಪಡಿಸಿದೆ. ಪುಕ್ಕಟೆ ಭಾಗ್ಯಗಳು, ತುಷ್ಟೀಕರಣದ ರಾಜಕಾರಣವನ್ನು ಜನ ತಿರಸ್ಕರಿಸಿದ್ದಾರೆ ಎಂದರು.
ಜಮ್ಮು ಕಾಶ್ಮೀರದಲ್ಲಿ ೩೭೦ನೇ ವಿಧಿ ರದ್ದತಿ ನಂತರ ಅಭಿವೃದ್ಧಿ ಹೆಸರಲ್ಲಿ ಬಿಜೆಪಿ ಮುಂದಡಿ ಇಟ್ಟಿದ್ದು, ಉತ್ತಮ ಪ್ರದರ್ಶನವನ್ನು ವಿಧಾನಸಭೆ ಚುನಾವಣೆಯಲ್ಲಿ ಕಂಡಿದೆ. ಜಮ್ಮು ಕಾಶ್ಮೀರದ ಜನಾಶೀರ್ವಾದವೂ ಭವಿಷ್ಯದಲ್ಲಿ ಕಣಿವೆಯಲ್ಲಿ ಬಿಜೆಪಿ ಅಧಿಕಾರಕ್ಕೆ ಏರುವ ಮುನ್ಸೂಚನೆ ನೀಡಿದೆ ಎಂದು ಹೇಳಿದರು.
ಪ್ರತಿ ಪಕ್ಷ ಸ್ಥಾನದಲ್ಲಿ ಇದ್ದುಕೊಂಡು ಬಿಜೆಪಿ ಕಣಿವೆ ರಾಜ್ಯದ ಜನರ ನೋವು, ನಲಿವುಗಳಿಗೆ ಸ್ಪಂದಿಸಲಿದೆ. ಕೆಲವೇ ದಿನಗಳಲ್ಲಿ ನಡೆಯುವ ಮಹಾರಾಷ್ಟಾದ ವಿಧಾನಸಭೆಗೆ ಚುನಾವಣೆಯಲ್ಲೂ ಬಿಜೆಪಿ ಭರ್ಜರಿ ಗೆಲುವು ಸಾಧಿಸಲು ಹರಿಯಾಣದ ಫಲಿತಾಂಶ ದಿಕ್ಸೂಚಿಯಾಗಿದೆ ಎಂದು ಪ್ರಕಟಣೆ ಮೂಲಕ ಹರ್ಷ ವ್ಯಕ್ತಪಡಿಸಿದ್ದಾರೆ.