ಹೊಸ ದಿಗಂತ ಡಿಜಿಟಲ್ ಡೆಸ್ಕ್:
ವಿಐಪಿಗಳ ಭದ್ರತಾ ಕರ್ತವ್ಯದಿಂದ ಎನ್ಎಸ್ಜಿಯನ್ನು ಕೇಂದ್ರ ಸರ್ಕಾರ ಹಿಂಪಡೆದುಕೊಂಡಿದೆ.
ವಿಐಪಿಗಳ ಭದ್ರತಾ ಕರ್ತವ್ಯಗಳಿಂದ ಭಯೋತ್ಪಾದನಾ ನಿಗ್ರಹ ಕಮಾಂಡೋ ಪಡೆಯಾಗಿರುವ ಎನ್ಎಸ್ಜಿಯನ್ನು ಸಂಪೂರ್ಣವಾಗಿ ಹಿಂತೆಗೆದುಕೊಳ್ಳಲು ಮತ್ತು ಅವರು ಭದ್ರತೆ ಒದಗಿಸುತ್ತಿರುವ 9 ಜನ ‘ಅಧಿಕ ಅಪಾಯದ’ ವಿಐಪಿಗಳಿಗೆ ಮುಂದಿನ ಒಂದು ತಿಂಗಳೊಳಗೆ ಸಿಆರ್ಪಿಎಫ್ ಯೋಧರನ್ನು ನಿಯೋಜಿಸುವಂತೆ ಕೇಂದ್ರ ಸರಕಾರ ಆದೇಶಿಸಿದೆ .
ಇತ್ತೀಚೆಗೆ ಸಂಸತ್ತಿನ ಭದ್ರತಾ ಕರ್ತವ್ಯಗಳಿಂದ ಹಿಂತೆಗೆದುಕೊಂಡ ವಿಶೇಷ ತರಬೇತಿ ಪಡೆದ ಸಿಬ್ಬಂದಿಯ ಹೊಸ ಬೆಟಾಲಿಯನ್ ಅನ್ನು ವಿಐಪಿಗಳ ಭದ್ರತೆಗಾಗಿ ಸಿಆರ್ಪಿಎಫ್ ಜೊತೆಗೆ ಸೇರಿಸಲು ಇದೇ ಸಂದರ್ಭದಲ್ಲಿ ಗೃಹ ಸಚಿವಾಲಯ (ಎಂಎಚ್ಎ) ಅನುಮತಿ ನೀಡಿದೆ.
ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್, ಬಿಎಸ್ಪಿ ಮುಖ್ಯಸ್ಥೆ ಮಾಯಾವತಿ, ಕೇಂದ್ರ ರಕ್ಷಣಾ ಸಚಿವ ರಾಜನಾಥ್ ಸಿಂಗ್, ಹಿರಿಯ ಬಿಜೆಪಿ ನಾಯಕ ಮತ್ತು ಮಾಜಿ ಉಪ ಪ್ರಧಾನಿ ಎಲ್.ಕೆ. ಅಡ್ವಾಣಿ, ಕೇಂದ್ರ ಹಡಗು ಸಚಿವ ಸರ್ಬಾನಂದ ಸೋನೊವಾಲ್, ಛತ್ತೀಸ್ಗಢದ ಮಾಜಿ ಮುಖ್ಯಮಂತ್ರಿ ರಮಣ್ ಸಿಂಗ್, ಜಮ್ಮು ಮತ್ತು ಕಾಶ್ಮೀರದ ಮಾಜಿ ಮುಖ್ಯಮಂತ್ರಿ ಮತ್ತು ಡೆಮಾಕ್ರಟಿಕ್ ಪ್ರೊಗ್ರೆಸ್ಸಿವ್ ಆಜಾದ್ ಪಾರ್ಟಿ (ಡಿಪಿಎಪಿ) ಅಧ್ಯಕ್ಷ ಗುಲಾಂ ನಬಿ ಆಜಾದ್, ನ್ಯಾಷನಲ್ ಕಾನ್ಫರೆನ್ಸ್ (ಎನ್ಸಿ) ಅಧ್ಯಕ್ಷ ಫಾರೂಕ್ ಅಬ್ದುಲ್ಲಾ ಮತ್ತು ಆಂಧ್ರಪ್ರದೇಶದ ಮುಖ್ಯಮಂತ್ರಿ ಎನ್.ಚಂದ್ರಬಾಬು ನಾಯ್ಡು ಸೇರಿದಂತೆ ಒಂಬತ್ತು ‘ಝಡ್ ಪ್ಲಸ್’ ವರ್ಗದ ವಿಐಪಿಗಳಿಗೆ ರಾಷ್ಟ್ರೀಯ ಭದ್ರತಾ ಪಡೆಯ (ಎನ್ಎಸ್ಜಿ) ‘ಬ್ಲ್ಯಾಕ್ ಕ್ಯಾಟ್’ ಕಮಾಂಡೋಗಳು ರಕ್ಷಣೆ ನೀಡುತ್ತಿದ್ದಾರೆ. ಆದರೆ ಇನ್ನು ಮುಂದೆ ಇವರೆಲ್ಲರಿಗೆ ಎನ್ಎಸ್ಜಿ ಬದಲಾಗಿ ಕೇಂದ್ರ ಮೀಸಲು ಪೊಲೀಸ್ ಪಡೆ (ಸಿಆರ್ ಪಿಎಫ್) ಯೋಧರು ಭದ್ರತೆ ನೀಡಲಿದ್ದಾರೆ .
ಗೃಹ ಸಚಿವಾಲದ ಅಧೀನದಲ್ಲಿರುವ ಉಭಯ ಪಡೆಗಳ ನಡುವಿನ ಕರ್ತವ್ಯಗಳ ವರ್ಗಾವಣೆ ಒಂದು ತಿಂಗಳೊಳಗೆ ಪೂರ್ಣಗೊಳ್ಳುವ ನಿರೀಕ್ಷೆಯಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಆರು ವಿಐಪಿ ಭದ್ರತಾ ಬೆಟಾಲಿಯನ್ಗಳನ್ನು ಹೊಂದಿರುವ ಸಿಆರ್ಪಿಎಫ್ಗೆ ಈ ಉದ್ದೇಶಕ್ಕಾಗಿ ಏಳನೇ ಬೆಟಾಲಿಯನ್ ಅನ್ನು ವಿಲೀನಗೊಳಿಸಲು ಸೂಚಿಸಲಾಗಿದೆ. ಹೊಸ ಬೆಟಾಲಿಯನ್ ಕೆಲ ತಿಂಗಳ ಹಿಂದಿನವರೆಗೆ ಸಂಸತ್ತಿನ ಕಾವಲಿಗೆ ನಿಯೋಜನೆಯಾಗಿತ್ತು. ಕಳೆದ ವರ್ಷ ನಡೆದ ಭದ್ರತಾ ವ್ಯವಸ್ಥೆಯ ಉಲ್ಲಂಘನೆಯ ನಂತರ, ಸಂಸತ್ತಿನ ಭದ್ರತೆಯನ್ನು ಸಿಆರ್ಪಿಎಫ್ನಿಂದ ಸಿಐಎಸ್ಎಫ್ಗೆ ಹಸ್ತಾಂತರಿಸಲಾಯಿತು ಎಂದು ಹಿರಿಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.