ಹೊಸದಿಗಂತ ವರದಿ ಮಡಿಕೇರಿ:
ಬ್ರಹ್ಮಗಿರಿ ತಪ್ಪಲಿನಲ್ಲಿರುವ ಪವಿತ್ರ ತೀರ್ಥಕ್ಷೇತ್ರ ತಲಕಾವೇರಿಯ ಬ್ರಹ್ಮಕುಂಡಿಕೆಯಲ್ಲಿ ಗುರುವಾರ ಬೆಳಗ್ಗೆ 7.41ಕ್ಕೆ ಸಲ್ಲುವ ತುಲಾ ಲಗ್ನದಲ್ಲಿ ಮಾತೆ ಕಾವೇರಿಯು ತೀರ್ಥರೂಪಿಣಿಯಾಗಿ ಗೋಚರಿಸುವ ಮೂಲಕ ನೆರೆದಿದ್ದ ಭಕ್ತರನ್ನು ಪುಳಕಿತರನ್ನಾಗಿಸಿದಳು.
ಸೂರ್ಯನು ತುಲಾ ರಾಶಿಯನ್ನು ಪ್ರವೇಶಿಸುವ ತುಲಾ ಸಂಕ್ರಮಣದಂದು ಬೆಳಗ್ಗೆ 7.40ಕ್ಕೆ ತೀರ್ಥೋದ್ಭವವಾಗಲಿರುವುದಾಗಿ ಹೇಳಲಾಗಿತ್ತಾದರೂ, ನಿಗದಿತ ಸಮಯಕ್ಕಿಂತ ಒಂದು ನಿಮಿಷ ತಡವಾಗಿ ತಾಯಿ ಕಾವೇರಿ ಆವೀರ್ಭವಿಸುವುದರೊಂದಿಗೆ ಭಕ್ತ ಜನರನ್ನು ಹರಸಿದಳು.
ಕ್ಷೇತ್ರದ ಪ್ರಧಾನ ಅರ್ಚಕ ಪ್ರಶಾಂತ್ ಆಚಾರ್ ನೇತೖತ್ವದಲ್ಲಿ ಅರ್ಚಕ ಸಮೂಹದಿಂದ ಕಾವೇರಿ ಮಾತೆಗೆ ಸಾಂಪ್ರದಾಯಿಕ ಪೂಜೆ ನೆರವೇರಿಸಿದ ಕೆಲವೇ ನಿಮಿಷಗಳಲ್ಲಿ ಅರ್ಚಕರ ಮಂತ್ರಘೋಷ ಹಾಗೂ ನೆರೆದಿದ್ದ ಸಹಸ್ರಾರು ಭಕ್ತ ಜನರ ‘ಜೈ ಜೈ ಮಾತಾ ಕಾವೇರಿ ಮಾತಾ, ಉಕ್ಕಿ ಬಾ ಉಕ್ಕಿ ಬಾ ಕಾವೇರಮ್ಮ ಉಕ್ಕಿ ಬಾ’ ಎಂಬ ಜಯಘೋಷಗಳ ನಡುವೆ ಬ್ರಹ್ಮಕುಂಡಿಕೆಯಲ್ಲಿ ಕಾವೇರಿಯು ತೀರ್ಥರೂಪಿಣಿಯಾಗಿ ಗೋಚರಿಸುತ್ತಿದ್ದಂತೆ ಕ್ಷೇತ್ರದಲ್ಲಿ ಸೇರಿದ್ದ ಸಹಸ್ರಾರು ಭಕ್ತರು ಭಾವಪರವಶರಾದರು.
ತೀರ್ಥೋದ್ಭವವಾಗುತ್ತಿದಂತೆ ಅರ್ಚಕರು ಪವಿತ್ರ ತೀರ್ಥನ್ನು ಭಕ್ತಾದಿಗಳ ಮೇಲೆ ಪ್ರೋಕ್ಷಣೆ ಮಾಡಿದರು. ತೀರ್ಥ ಪಡೆದ ಭಕ್ತಜನರು ಪುಳಕಿತರಾದರು. ಕೊರೆಯುವ ಚಳಿಯ ನಡುವೆಯೂ ಕಾವೇರಿ ತೀರ್ಥೋದ್ಭವಕ್ಕೆ ಕೊಡಗು ಮಾತ್ರವಲ್ಲದೆ ವಿವಿಧೆಡೆಗಳಿಂದ ಆಗಮಿಸಿದ್ದ ಸಾವಿರಾರು ಭಕ್ತರಿಗೆ ಜಿಲ್ಲಾಡಳಿತದ ವತಿಯಿಂದ ಸೂಕ್ತ ವ್ಯವಸ್ಥೆಗಳನ್ನು ಕಲ್ಪಿಸಲಾಗಿತ್ತು.
ಭಾಗಮಂಡಲದಿಂದ ತಲಕಾವೇರಿಗೆ ತೆರಳುವ ರಸ್ತೆಯ ಇಕ್ಕೆಲಗಳಲ್ಲೂ ವಿದ್ಯುತ್ ದೀಪಗಳನ್ನು ಅಳವಡಿಸಲಾಗಿತ್ತು. ಅಂತೆಯೇ ಉಚಿತವಾಗಿ ಸರಕಾರಿ ಬಸ್ ವ್ಯವಸ್ಥೆಯನ್ನೂ ಕಲ್ಪಿಸಲಾಗಿತ್ತು. ಕಾವೇರಿ ಕ್ಷೇತ್ರ ಪುಷ್ಪಾಲಂಕಾದಿಂದ ಕಂಗೊಳಿಸುತ್ತಿತ್ತು. ದೇವಾಲಯದ ಅನ್ನ ಪ್ರಸಾದ ಸಭಾಭವನದಲ್ಲಿ ಕೊಡಗು ಏಕೀಕರಣ ರಂಗದಿಂದ ಭಕ್ತರಿಗೆ ಉಪಾಹಾರ ವಿತರಿಸಲಾಯಿತು.
ಕಜಿಲ್ಲಾ ಉಸ್ತುವಾರಿ ಸಚಿವ ಬೋಸರಾಜು, ಶಾಸಕರಾದ ಎ.ಎಸ್ ಪೊನ್ನಣ್ಣ, ಡಾ ಮಂಥರ್ ಗೌಡ, ಸುಜಾಕುಶಾಲಪ್ಪ, ಸರ್ಕಾರದ ಗ್ಯಾರಂಟಿ ಯೋಜನೆ ಅನುಷ್ಠಾನ ಸಮಿತಿ ಜಿಲ್ಲಾಧ್ಯಕ್ಷ ಧರ್ಮಜ ಉತ್ತಪ್ಪ, ಜಿಲ್ಲಾಧಿಕಾರಿ ವೆಂಕಟ್ ರಾಜಾ, ಪೊಲೀಸ್ ವರಿಷ್ಠಾಧಿಕಾರಿ ಕೆ ರಾಮರಾಜನ್, ಎಎಸ್ ಪಿ ಸುಂದರ್ ರಾಜ್, ಅಪರ
ಜಿಲ್ಲಾಧಿಕಾರಿ ಐಶ್ವರ್ಯ ಸೇರಿದಂತೆ ಅನೇಕರು ಕಾವೇರಿ ತೀರ್ಥೋದ್ಭವವನ್ನು ಕಣ್ತುಂಬಿಕೊಂಡರು.