ಹೊಸದಿಗಂತ ಡಿಜಿಟಲ್ ಡೆಸ್ಕ್;
ಹರಿಯಾಣದ ಮುಖ್ಯಮಂತ್ರಿಯಾಗಿ 2ನೇ ಬಾರಿಗೆ ಪ್ರಮಾಣವಚನ ಸ್ವೀಕರಿಸಿದ ನಯಾಬ್ ಸಿಂಗ್ ಸೈನಿ, ಇಂದು ಸೆಕ್ರೆಟರಿಯೇಟ್ ಹಾಲ್ನಲ್ಲಿ ಅಧಿಕೃತವಾಗಿ ಅಧಿಕಾರ ವಹಿಸಿಕೊಂಡರು.
ಅಧಿಕಾರ ವಹಿಸಿಕೊಂಡ ಬಳಿಕ ಕ್ಯಾಬಿನೆಟ್ ಬ್ರೀಫಿಂಗ್ ಉದ್ದೇಶಿಸಿ ಮಾತನಾಡಿದ ನೂತನ ಸಿಎಂ, ರಾಜ್ಯದ ಎಲ್ಲಾ ಸರ್ಕಾರಿ ಆಸ್ಪತ್ರೆಗಳಲ್ಲಿ ದೀರ್ಘಕಾಲದ ಕಿಡ್ನಿ ರೋಗಿಗಳಿಗೆ ಉಚಿತ ಚಿಕಿತ್ಸೆ ನೀಡುವುದಾಗಿ ಪ್ರಣಾಳಿಕೆಯಲ್ಲಿ ಭರವಸೆ ನೀಡಿದ್ದೆವು. ಅದಕ್ಕೆ ಸಂಬಂಧಿಸಿದ ಕಡತಕ್ಕೆ ಸಹಿ ಹಾಕಿದ್ದೇನೆ. ಕಿಡ್ನಿ ಡಯಾಲಿಸಿಸ್ ವೆಚ್ಚವನ್ನು ಹರಿಯಾಣ ಸರ್ಕಾರ ಭರಿಸಲಿದೆ. ಡಯಾಲಿಸಿಸ್ ಸೇವೆಯನ್ನು ಮುಂದಿನ ದಿನಗಳಲ್ಲಿ ಎಲ್ಲ ವೈದ್ಯಕೀಯ ಕಾಲೇಜುಗಳಲ್ಲಿಯೂ ಒದಗಿಸಲಾಗುವುದು ಎಂದು ಘೋಷಿಸಿದರು.
ಮೂರನೇ ಬಾರಿಗೆ ಬಾರಿ ಜನಾದೇಶ ನೀಡಿ ಪ್ರಧಾನಿ ಮೋದಿಯವರ ನೀತಿಗಳನ್ನು ಅನುಮೋದಿಸಿದ್ದಕ್ಕಾಗಿ ಹರಿಯಾಣದ ಜನರಿಗೆ ನಾನು ಧನ್ಯವಾದ ಹೇಳುತ್ತೇನೆ. ಆಡಳಿತ ವಿರೋಧಿ ನೀತಿಯನ್ನು ಧಿಕ್ಕರಿಸಿ, ರಾಜ್ಯದ ಜನ ನಮಗೆ ಸಂಪೂರ್ಣ ಬಹುಮತ ನೀಡಿದ್ದಾರೆ. ರೈತರನ್ನು ಪ್ರಚೋದಿಸುವುದು ಸೇರಿದಂತೆ ಯುವಕರು, ಕ್ರೀಡಾಪಟುಗಳನ್ನು ದಾರಿ ತಪ್ಪಿಸುವಂತಹ ಅನೇಕ ಕೆಲಸ ನಡೆದಿದೆ. ಆದರೆ, ರಾಜ್ಯದ ಜನ ಪ್ರಧಾನಿ ಮೋದಿಯವರ ದೂರದೃಷ್ಟಿ ಆಡಳಿತಕ್ಕೆ ಬೆಲೆ ನೀಡಿದ್ದಾರೆ. ಈ ಮೂಲಕ ಕಾಂಗ್ರೆಸ್ನ ಭರವಸೆಗಳನ್ನು ಧಿಕ್ಕರಿಸಿದ್ದಾರೆ’ ಎಂದರು.
ನಮ್ಮ ಸರ್ಕಾರ ಮಹಿಳಾ ಶಕ್ತಿಯನ್ನು ಬಲಪಡಿಸುವ ನಿಟ್ಟಿನಲ್ಲಿ ಕೆಲಸ ಮಾಡುತ್ತದೆ. ಅಪರಾಧ ಚಟುವಟಿಕೆಗಳಲ್ಲಿ ತೊಡಗಿರುವವರು ರಾಜ್ಯವನ್ನು ತೊರೆಯಿರಿ ಅಥವಾ ಸುಧಾರಿಸಿಕೊಳ್ಳಿ, ಇಲ್ಲದಿದ್ದರೆ ನಾವು ಸುಧಾರಿಸುತ್ತೇವೆ ಎಂದು ಸಿಎಂ ಸೈನಿ ಇದೇ ವೇಳೆ ಎಚ್ಚರಿಕೆ ನೀಡಿದರು.