ಹೊಸದಿಗಂತ ವರದಿ ಹಾವೇರಿ :
ನಗರದ ಕಬರಸ್ಥಾನದಲ್ಲಿ ವಾಣಿಜ್ಯ ಸಂಕೀರ್ಣ ನಿರ್ಮಾಣ ಖಂಡಿಸಿ ಹಿಂದೂ ಸಂಘಟನೆಗಳು ಕರೆ ನೀಡಿದ್ದ ಬಂದ್ ಗೆ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಗಿದೆ.
ನಗರದ ಪುರಸಿದ್ದೇಶ್ವರ ದೇವಸ್ಥಾನದ ಬಳಿ ಹಾಗೂ ಬಸ್ ನಿಲ್ದಾಣದ ಬಳಿ ಜನರನ್ನು ಸಂಘಟಿಸಲು ನಿಂತಿದ್ದ ಸುಮಾರು 20ಕ್ಕೂ ಹೆಚ್ಚು ನಾಯಕರನ್ನು ಪೋಲೀಸರು ವಶಕ್ಕೆ ಪಡೆದು ಕೆರೆಮತ್ತೀಹಳ್ಳಿಯ ಕಾರಾಗೃಹದತ್ತ ಕರೆದೊಯ್ದರು.
ನಂತರ ಸುಮಾರು 11.30 ಹೊತ್ತಿಗೆ ಮತ್ತೊಂದು ತಂಡ ನಗರದ ಪುರಸಿದ್ದೇಶ್ಚರ ದೇವಸ್ಥಾನ ದ ಬಳಿ ಜಮಾವಣೆಗೊಂಡು ಪ್ರತಿಭಟನೆ ನಡೆಸಲು ಮುಂದಾದರು. ಆಗ ಡಿ.ವೈ.ಎಸ್ಪಿ. ಎಂ.ಎಸ್. ಪಾಟೀಲ ನೇತೈತ್ವದಲ್ಲಿ ಸಿಪಿಐ ಹಾಗೂ ಸಿಬ್ಬಂದಿಗಳು ಪ್ರತಿಭಟನಾಕಾಋನ್ನು ತಡೆದರು. ನಿಮ್ಮ ಪ್ರತಿಭಟನೆಗೆ ಇಂದು ಅವಕಾಶವಿಲ್ಲ. ಚುನಾವಣೆ ಇದಕ್ಕೆ ಅನುಮತಿ ನೀಡಲ್ಲ ಎಂಸು ಸಮಜಾಯಿಷಿ ನೀಡಿ ಅವರನ್ನು ವಶಕ್ಕೆ ಪಡೆದರು.
ಈ ವೇಳೆ ಪ್ರತಿಭಟನಾಕಾರರು ರಾಜ್ಯ ಸರ್ಕಾರದ ವಿರುದ್ದ, ಮುಸ್ಲಿಂ ತುಷ್ಟೀಕರಣದ ವಿರುದ್ಧ ಆಕ್ರೋಶ ಹೊರಹಾಕಿ ಘೋಷಣೆ ಕೂಗಿದರು. ಹಿಂದೂ ವಿರೋಧಿ ಸರ್ಕಾರದ ನೀತಿಯಿಂದ ಸಾಮಾನ್ಯ ವರ್ಗದ ಜನರು ಬದುಕು ಕಷ್ಟಕರವಾಗಿದೆ ಎಂದು ದೂರಿದರು.
ಇದುವರೆಗೂ ಒಟ್ಟು 70ಕ್ಕೂ ಹೆಚ್ಚು ನಾಯಕರನ್ನು ವಶಕ್ಕೆ ಪಡೆದ ಪೋಲಿಸರು 5 ವಾಹನಗಳಲ್ಲಿ ಅವರನ್ನು ಕೆರೆಮತ್ತೀಹಳ್ಳಿಯ ಕಾರಾಗೃಹದತ್ತ ಕರೆದೊಯ್ದರು.
ಹುಕ್ಕೇರಿಮಠ, ಗಾಂಧಿರಸ್ತೆ, ಸುಭಾಸ ವೃತ್ತ, ಸೇರಿದಂತೆ ಪ್ರಮುಖ ಭಾಗದಲ್ಲಿ ಅಂಗಡಿ ಮುಂಗಟ್ಟೆಗಳನ್ನು ವ್ಯಾಪಾರಿಗಳು ಸ್ವಯಂ ಪ್ರೇರಿತವಾಗಿ ಬಂದ್ ಮಾಡಿ ಬೆಂಬಲಿಸಿದಂತೆ ಕಂಡು ಬಂತು. ಆದರೇ ಬಸ್ ನಿಲ್ದಾಣದ ಬಳಿ ಅಲ್ಲಲ್ಲಿ ಅಂಗಡಿ ತೆರೆದಿದ್ದುದು ಯಥಾ ಪ್ರಕಾರ ಇತ್ತಾದರೂ, ಅಷ್ಟಾಗಿ ಜನದಟ್ಟಣೆ ಕಂಡು ಬರಲಿಲ್ಲ.