ಹೊಸದಿಗಂತ ಡಿಜಿಟಲ್ ಡೆಸ್ಕ್:
ರಾಜ್ಯ ಸರ್ಕಾರ ಮತ್ತು ರಾಜಭವನದ ನಡುವಿನ ಶೀತಲ ಸಮರದ ನಡುವೆಯೇ, ಇಂದಿನ ವಿಶೇಷ ಜಂಟಿ ಅಧಿವೇಶನಕ್ಕೆ ರಾಜ್ಯಪಾಲರು ಆಗಮಿಸುವುದು ಈಗ ಅಧಿಕೃತವಾಗಿದೆ. ಸಂವಿಧಾನದ ವಿಧಿ 176.1 ರ ಅನ್ವಯ ಅಧಿವೇಶನವನ್ನು ಉದ್ದೇಶಿಸಿ ಮಾತನಾಡಲು ರಾಜ್ಯಪಾಲರು ಸಮ್ಮತಿಸಿದ್ದಾರೆ ಎಂದು ಲೋಕಭವನದ ಮೂಲಗಳು ಖಚಿತಪಡಿಸಿವೆ.
ಈ ಬೆಳವಣಿಗೆಯ ಬೆನ್ನಲ್ಲೇ ಸರ್ಕಾರದ ಮುಖ್ಯ ಕಾರ್ಯದರ್ಶಿ ಶಾಲಿನಿ ರಜನೀಶ್ ಅವರು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ನಿವಾಸಕ್ಕೆ ತೆರಳಿ, ರಾಜ್ಯಪಾಲರ ಆಗಮನದ ಬಗ್ಗೆ ಅಧಿಕೃತ ಮಾಹಿತಿ ನೀಡಿದ್ದಾರೆ. ನಿಗದಿಯಂತೆ ಬೆಳಗ್ಗೆ 11 ಗಂಟೆಗೆ ರಾಜ್ಯಪಾಲರು ಉಭಯ ಸದನಗಳ ಸದಸ್ಯರನ್ನು ಉದ್ದೇಶಿಸಿ ಭಾಷಣ ಮಾಡಲಿದ್ದಾರೆ.
ರಾಜ್ಯಪಾಲರು ಭಾಷಣ ಮಾಡಲು ಒಪ್ಪಿದ್ದರೂ ಸಹ, ಅವರು ಸರ್ಕಾರದ ಆಶಯದಂತೆ ಪೂರ್ಣ ಭಾಷಣ ಓದುತ್ತಾರೆಯೇ ಎಂಬುದು ಈಗ ಮಿಲಿಯನ್ ಡಾಲರ್ ಪ್ರಶ್ನೆಯಾಗಿದೆ. ಈ ಹಿಂದೆ ಭಾಷಣದ ಕರಡಿನಲ್ಲಿದ್ದ 11 ಪ್ರಮುಖ ಅಂಶಗಳನ್ನು ತೆಗೆದುಹಾಕುವಂತೆ ರಾಜ್ಯಪಾಲರು ಸೂಚಿಸಿದ್ದರು. ಆದರೆ, ಸರ್ಕಾರ ಕೇವಲ 2 ಅಂಶಗಳನ್ನಷ್ಟೇ ಕೈಬಿಟ್ಟು, ಉಳಿದ ಒಂಬತ್ತು ಅಂಶಗಳನ್ನು ಉಳಿಸಿಕೊಂಡಿದೆ. ತಾನು ಸಿದ್ಧಪಡಿಸಿದ ಭಾಷಣದ ಪ್ರತಿಯನ್ನೇ ವಿಧಾನಸೌಧಕ್ಕೂ ರವಾನಿಸಿದೆ.
ಇಂದಿನ 11 ಗಂಟೆಯ ಅಧಿವೇಶನ ರಾಜ್ಯದ ರಾಜಕಾರಣದಲ್ಲಿ ಹೊಸ ಸಂಚಲನ ಮೂಡಿಸುವುದಂತೂ ಖಚಿತ.


