ಹೊಸದಿಗಂತ ಡಿಜಿಟಲ್ ಡೆಸ್ಕ್:
ಸಿಂಗಾಪುರದಲ್ಲಿ ಡಿ, 12 ರಂದು ಮುಕ್ತಾಯವಾದ ಚದುರಂಗ ವಿಶ್ವಚಾಂಪಿಯನ್ ಶಿಪ್ ನಲ್ಲಿ ವಿಜೇತನಾದ ಭಾರತದ ಡಿ. ಗುಕೇಶ್ ಸುಮಾರು ಏಳು ವರ್ಷಗಳ ಹಿಂದೆ ದಕ್ಷಿಣ ಕನ್ನಡ ಜಿಲ್ಲೆಯ ಬೆಳ್ತಂಗಡಿಯಲ್ಲಿ ನಡೆದ ಚೆಸ್ ಸ್ಪರ್ಧೆಯಲ್ಲಿ ಭಾಗವಹಿಸಿದ್ದರು.
ಬೆಳ್ತಂಗಡಿಯ ಶ್ರೀ ಮಂಜುನಾಥ ಸ್ವಾಮಿ ಕಲಾಭವನದಲ್ಲಿ ಬೆಳ್ತಂಗಡಿ ರೋಟರಿ ಕ್ಲಬ್ ಹಾಗೂ ಬೆಳ್ತಂಗಡಿ ವಕೀಲರ ಸಂಘದ ಜಂಟಿ ಆಶ್ರಯದಲ್ಲಿ ನಡೆದ ನ್ಯಾಶನಲ್ ರೋಟೋ ಲಾಯರ್ಸ್ ಕಪ್ ಟೂರ್ನಮೆಂಟ್ ನಲ್ಲಿ ಗುಕೇಶ್ ಅವರು ಭಾಗವಹಿಸಿ ಗಮನಸೆಳೆದಿದ್ದರು.
ಅಂದು ನಡೆದ ಪಂದ್ಯಾಟದಲ್ಲಿ ಟಾಪ್ 20ರಲ್ಲಿ 17 ನೇ ಯವರಾಗಿದ್ದರು.
ಬಾಲಕನಾಗಿದ್ದ ಗುಕೇಶ್ 5 ದಿನಗಳ ಕಾಲ ಬೆಳ್ತಂಗಡಿಯಲ್ಲಿದ್ದು ಎಲ್ಲರೊಂದಿಗೆ ಸ್ನೇಹಮಯವಾಗಿದ್ದ. ಆಟದಲ್ಲಿ ಉತ್ಕೃಷ್ಟತೆಯನ್ನು ಕಾಯ್ದುಕೊಂಡಿದ್ದ. ವಿಶ್ವಚಾಂಪಿಯನ್ ಆಗಿರುವ ಅವರು ಬೆಳ್ತಂಗಡಿಯಲ್ಲೂ ಚೆಸ್ ಆಟ ಆಡಿ ಗಮನಸೆಳದಿರುವುದು ನಮಗೆಲ್ಲ ಹೆಮ್ಮೆಯ ವಿಚಾರ ಎಂದು ಬೆಳ್ತಂಗಡಿಯಲ್ಲಿ ನಡೆದ ಟೂರ್ನಮೆಂಟಿನ ಸಂಘಟಕರಲ್ಲೊಬ್ಬರಾಗಿದ್ದ ವಕೀಲ ರತ್ನವರ್ಮ ಬುಣ್ಣು ಅವರು ಸಂತಸ ವ್ಯಕ್ತಪಡಿಸಿದ್ದಾರೆ.