ಹೊಸದಿಗಂತ ಡಿಜಿಟಲ್ ಡೆಸ್ಕ್:
2017ರ ಸೆಕ್ಸ್ ಸಿಡಿ ಪ್ರಕರಣಕ್ಕೆ ಸಂಬಂಧಿಸಿದಂತೆ ಛತ್ತೀಸ್ಗಢದ ಮಾಜಿ ಮುಖ್ಯಮಂತ್ರಿ ಭೂಪೇಶ್ ಭಗೇಲ್ ಅವರಿಗೆ ನೀಡಲಾಗಿದ್ದ ಖುಲಾಸೆ ಆದೇಶವನ್ನು ಸಿಬಿಐ ವಿಶೇಷ ನ್ಯಾಯಾಲಯ ರದ್ದುಗೊಳಿಸಿದೆ. ಈ ತೀರ್ಪು ಶನಿವಾರ ಪ್ರಕಟವಾಗಿದ್ದು, ಪ್ರಕರಣ ಮತ್ತೆ ಚರ್ಚೆಯ ಕೇಂದ್ರಬಿಂದುವಾಗಿದೆ.
ಮಾಜಿ ಲೋಕೋಪಯೋಗಿ ಇಲಾಖೆ ಸಚಿವ ರಾಜೇಶ್ ಮುನಾತ್ ಅವರ ಮಾನನಷ್ಟಕ್ಕೆ ಸಂಬಂಧಿಸಿದ ಈ ಪ್ರಕರಣದಲ್ಲಿ, 2024ರಲ್ಲಿ ಮ್ಯಾಜಿಸ್ಟ್ರೇಟ್ ನ್ಯಾಯಾಲಯವು ಭಗೇಲ್ ಅವರನ್ನು ನಿರ್ದೋಷಿ ಎಂದು ಘೋಷಿಸಿತ್ತು. ಆದರೆ, ಆ ಆದೇಶವನ್ನು ಪ್ರಶ್ನಿಸಿ ಸಲ್ಲಿಸಲಾಗಿದ್ದ ಮೇಲ್ಮನವಿಯನ್ನು ಪರಿಶೀಲಿಸಿದ ಸಿಬಿಐ ವಿಶೇಷ ಕೋರ್ಟ್ ಇದೀಗ ಅದನ್ನು ರದ್ದುಪಡಿಸಿದೆ.
ಇದೇ ವಿಚಾರಣೆಯಲ್ಲಿ ಇತರ ಆರೋಪಿಗಳಾದ ಕೈಲಾಶ್ ಮುರಾರ್ಕ, ವಿನೋದ್ ವರ್ಮಾ ಮತ್ತು ವಿಜಯ್ ಭಾಟಿಯಾ ಸಲ್ಲಿಸಿದ್ದ ಅರ್ಜಿಗಳನ್ನೂ ಕೋರ್ಟ್ ತಿರಸ್ಕರಿಸಿದೆ.
ಈ ಪ್ರಕರಣದಲ್ಲಿ, ರಾಜೇಶ್ ಮುನಾತ್ ಅವರ ಹೆಸರಿಗೆ ಕಳಂಕ ತರಲು ನಕಲಿ ಅಶ್ಲೀಲ ವಿಡಿಯೋ ಬಿಡುಗಡೆ ಮಾಡಲಾಗಿದೆ ಎಂಬ ಆರೋಪ ಕೇಳಿಬಂದಿತ್ತು. 2016ರಲ್ಲಿ ಈ ವಿಡಿಯೋ ಪ್ರಸಾರವಾದ ಬಳಿಕ, ಪತ್ರಕರ್ತ ವಿನೋದ್ ಶರ್ಮಾ ಅವರನ್ನು ದೊಡ್ಡ ಪ್ರಮಾಣದ ಸಿಡಿಗಳೊಂದಿಗೆ ಬಂಧಿಸಲಾಗಿತ್ತು. ನಂತರ ಮುನಾತ್ ನೀಡಿದ ದೂರಿನ ಆಧಾರದಲ್ಲಿ ಭಗೇಲ್ ಅವರನ್ನು ನ್ಯಾಯಾಂಗ ಬಂಧನಕ್ಕೂ ಒಳಪಡಿಸಲಾಗಿತ್ತು.
ನಂತರ ಪ್ರಕರಣವನ್ನು ಸಿಬಿಐಗೆ ವರ್ಗಾಯಿಸಲಾಗಿದ್ದು, ಸುದೀರ್ಘ ತನಿಖೆಯ ಬಳಿಕ ಭಗೇಲ್ ಸೇರಿದಂತೆ ಆರು ಜನರ ವಿರುದ್ಧ ಚಾರ್ಜ್ಶೀಟ್ ಸಲ್ಲಿಸಲಾಗಿತ್ತು. ಹಲವು ವರ್ಷಗಳಿಂದ ನ್ಯಾಯಾಲಯದಲ್ಲಿ ಬಾಕಿಯಿದ್ದ ಈ ಪ್ರಕರಣದಲ್ಲಿ ಈಗ ಸಿಬಿಐ ಕೋರ್ಟ್ ತೀರ್ಪು ಹೊಸ ತಿರುವು ತಂದಿದೆ.



