ಹೊಸದಿಗಂತ ಡಿಜಿಟಲ್ ಡೆಸ್ಕ್:
ಅಂಗನವಾಡಿಯಲ್ಲಿ ಕೆಲಸ ಮಾಡುವ ಮಹಿಳಾ ಅಡುಗೆ ಸಹಾಯಕಿ ಗಂಡನಿಂದ ಅಂಗನವಾಡಿ ಕೇಂದ್ರಕ್ಕೆ ನುಗ್ಗಿ ಶಿಕ್ಷಕಿ ಮೇಲೆ ಅತ್ಯಾಚಾರಕ್ಕೆ ಯತ್ನಿಸಿರುವ ಆರೋಪ ಕೇಳಿಬಂದಿದೆ. ಬೆಳಗಾವಿ ಜಿಲ್ಲೆಯ ರಾಯಬಾಗ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ. ರಾಯಬಾಗ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಬೆಳಗಾವಿ ಜಿಲ್ಲೆಯ ರಾಯಬಾಗ ತಾಲೂಕಿನ ಅಂಗನವಾಡಿ ಕೇಂದ್ರದಲ್ಲಿರುವ ಅಡುಗೆ ಸಿಬ್ಬಂದಿಗೆ ಶೌಚಾಲಯ ಸ್ವಚ್ಛ ಮಾಡುವಂತೆ ಅಡುಗೆ ಮಾಡುವ ಮಹಿಳೆಗೆ ಶಿಕ್ಷಕಿ ಹೇಳಿದ್ದಾರೆ. ಈ ವಿಚಾರವನ್ನ ತನ್ನ ಗಂಡನಿಗೆ ಅಡುಗೆ ಸಿಬ್ಬಂದಿ ಸಾವಿತ್ರಿ ಕರ್ಲಟ್ಟಿ ಹೋಗಿ ಹೇಳಿದ್ದಾರೆ. ಇದರಿಂದ ಕೋಪಗೊಂಡು ಅಂಗನವಾಡಿಗೆ ಆಗಮಿಸಿದ್ದ ಆರೋಪಿ ಸಿದ್ರಾಯಿ ಕರ್ಲಟ್ಟಿ, ತನ್ನ ಹೆಂಡತಿಗೆ ಶೌಚಾಲಯ ಕ್ಲಿನ್ ಮಾಡಲು ಹಚ್ಚುತ್ತಿಯಾ ಅಂತಾ ಅವಾಚ್ಯವಾಗಿ ನಿಂದಿಸಿದ್ದಾರೆ.
ಇದೇ ವೇಳೆ ಶಿಕ್ಷಕಿ ಸೀರೆ ಎಳೆದು ಮಾನಭಂಗ ಪಡಿಸಲು ಯತ್ನಿಸಿರುವುದಾಗಿ ಆರೋಪಿಸಲಾಗಿದೆ. ಇನ್ನು ಶಿಕ್ಷಕಿ ಬ್ರೈನ್ ಟ್ಯೂಮರ್ದಿಂದ ಬಳಲುತ್ತಿದ್ದು, ಮಾನಸಿಕ ಕಿರುಕುಳ ತಾಳಲಾರದೇ ಆತ್ಮಹತ್ಯೆಗೂ ಯತ್ನಿಸಿದ್ದಾರೆ. ಸದ್ಯ ಜೀವ ಭಯ ಇದೆ ರಕ್ಷಣೆ ನೀಡಿ ಅಂತಾ ಶಿಕ್ಷಕಿ ಕುಟುಂಬ ಕಣ್ಣೀರಿಡುತ್ತಿದೆ.