ಹೊಸದಿಗಂತ ವರದಿ ಬೆಂಗಳೂರು:
ಹೊಸ ದಿಗಂತ ಪತ್ರಿಕೆಯ ವರದಿಗಾರ ಗುಡಿಬಂಡೆ ಭರತ್ ಜಿ.ಎಸ್ (34) ಭಾನುವಾರ ರಾತ್ರಿ ಕಾರು ಅಪಘಾತದಲ್ಲಿ ನಿಧನರಾಗಿದ್ದಾರೆ.
ಚಿಕ್ಕಬಳ್ಳಾಪುರದ ಗುಡಿಬಂಡೆಯ ಅವರ ಮನೆಯಿಂದ ಬಾಗೇಪಲ್ಲಿ -ಗುಡಿಬಂಡೆ ಮಾರ್ಗವಾಗಿ ಕಾರಿನಲ್ಲಿ ಬರುತ್ತಿದ್ದಾಗ ಮಾಚಹಳ್ಳಿ ಎಂಬಲ್ಲಿ ಕಾರು ನಿಯಂತ್ರಣ ತಪ್ಪಿ ಗಂಗಮ್ಮನ ಗುಡಿಗೆ ಡಿಕ್ಕಿ ಹೊಡೆದಿದೆ. ಈ ವೇಳೆ ಭರತ್ ತಲೆಗೆ ಗಂಭೀರ ಗಾಯವಾಗಿ ಆಸ್ಪತ್ರೆಯಲ್ಲಿ ಮೃತಪಟ್ಟಿದ್ದಾರೆ.
ಭರತ್ ಅವರು, ಉದಯಕಾಲ ಸೇರಿ ಹಲವು ಪತ್ರಿಕೆಗಳಲ್ಲಿ ವರದಿಗಾರರಾಗಿ ಕಾರ್ಯನಿರ್ವಹಿಸಿದ್ದರು. ಕಳೆದ 2 ವರ್ಷಗಳಿಂದ ಹೊಸ ದಿಗಂತ ಪತ್ರಿಕೆಯಲ್ಲಿ ಬೆಂಗಳೂರಿನಲ್ಲಿ ವರದಿಗಾರರಾಗಿ ಕಾರ್ಯನಿರ್ವಹಿಸುತ್ತಿದ್ದರು.
ಮೃತರು ಪತ್ನಿ, 9 ತಿಂಗಳ ಮಗು, ತಂದೆ, ತಾಯಿ, ಓರ್ವ ಸಹೋದರ ಹಾಗೂ ಸಹೋದರಿಯನ್ನು ಅಗಲಿದ್ದಾರೆ. ಅವರ ನಿಧನಕ್ಕೆ ಹೊಸ ದಿಗಂತ ಪತ್ರಿಕೆಯ ಆಡಳಿತ ಮಂಡಳಿ ಹಾಗೂ ಸಿಬ್ಬಂದಿ ಆಘಾತ ವ್ಯಕ್ತಪಡಿಸಿ, ಸಂತಾಪ ಸೂಚಿಸಿದ್ದಾರೆ.