ಹೊಸದಿಗಂತ ವರದಿ, ಕಲಬುರಗಿ:
ಒಂದು ವರ್ಷದ ಹಿಂದೆ ಅಯೋಧ್ಯೆಯ ಪವಿತ್ರ ಭೂಮಿಯಲ್ಲಿ ಪ್ರಭು ಶ್ರೀರಾಮನ ಭವ್ಯ ಮಂದಿರ ನಿರ್ಮಾಣ ಹಾಗೂ ಬಾಲ ರಾಮನ ಪ್ರಾಣ ಪ್ರತಿಷ್ಠಾಪನೆಯ ಐತಿಹಾಸಿಕ ಕ್ಷಣವನ್ನು ಕಣ್ತುಂಬಿಕೊಂಡಿರುವ ನಾವುಗಳೇ ಪುಣ್ಯವಂತರು ಎಂದು ವಿಶ್ವ ಹಿಂದೂ ಪರಿಷತ್ತಿನ ಕರ್ನಾಟಕ ಉತ್ತರ ಪ್ರಾಂತದ ಗೌರವಾಧ್ಯಕ್ಷ ಲಿಂಗರಾಜಪ್ಪ ಅಪ್ಪ ಹೇಳಿದರು.
ನಗರದ ಹೊರವಲಯದ ರಾಮತೀರ್ಥ ಬಡಾವಣೆಯಲ್ಲಿ ಅಯೋಧ್ಯೆಯಲ್ಲಿ ಭವ್ಯ ರಾಮ ಮಂದಿರ ನಿರ್ಮಾಣ ಹಾಗೂ ಬಾಲ ರಾಮನ ಪ್ರಾಣ ಪ್ರತಿಷ್ಠಾಪನೆಯಾಗಿ ಒಂದು ವರ್ಷದ ಹರ್ಷದ ಸಂಭ್ರಮಾಚರಣೆ ಹಿನ್ನೆಲೆಯಲ್ಲಿ ಹಮ್ಮಿಕೊಂಡಿದ್ದ ದೀಪೋತ್ಸವ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದ ಅವರು, ಸುಮಾರು ೫೦೦ ವರ್ಷಗಳ ನಿರಂತರ ಹೋರಾಟದ ಫಲವಾಗಿ ನಾವು ನೀವು ಅಯೋಧ್ಯೆಯಲ್ಲಿ ಭವ್ಯ ರಾಮಮಂದಿರ ನೋಡಲು ಸಾಧ್ಯವಾಗಿದೆ. ಭವ್ಯ ರಾಮ ಮಂದಿರದ ನಿರ್ಮಾಣದ ಸಂದರ್ಭದಲ್ಲಿ ಇಡೀ ದೇಶವೇ ಆ ದಿನವನ್ನು ದೀಪಾವಳಿಯ ಹಬ್ಬದಂತೆ ಸಂಭ್ರಮಿಸಿದೆ ಎಂದರು.
ಕಾರ್ಯಕ್ರಮದಲ್ಲಿ ಕಡಗಂಚಿಯ ಷಬ್ರ. ವೀರಭದ್ರ ಶಿವಾಚಾರ್ಯರು, ಚವದಾಪುರಿ ಹಿರೇಮಠದ ರಾಜಶೇಖರ ಶಿವಾಚಾರ್ಯರು, ಕಟ್ಟಿಮಠದ ಶ್ರೀಗಳು, ಮಹಾಲಕ್ಷ್ಮಿ ಶಕ್ತಿ ಪೀಠ ಸರಡಗಿಯ ಅಪ್ಪಾರಾವ ದೇವಿಮುತ್ಯಾ, ಗೊಬ್ಬುರವಾಡಿ ಪುಣ್ಯಾಶ್ರಮದ ಬಳಿರಾಮ ಮಹಾರಾಜರು, ನೀಲೂರು ಪೀಠದ ಶ್ರೀಗಳು, ಸ್ಟೇಷನ್ ಬಬಲಾದಿನ ಶಿವಮೂರ್ತಿ ಶಿವಾಚಾರ್ಯರು ಮಾತನಾಡಿದರು. ಈ ಸಂದರ್ಭದಲ್ಲಿ ಬಡಾವಣೆಯ ನಿವಾಸಿಗಳಾದ ಬಿ.ಎಸ್.ಪಾಟೀಲ್, ನಾಗಣ್ಣಾ ಕೊರಳ್ಳಿ, ಶಿವರಾಜ್ ತಳವಾರ,ಶರಣು ಗುತ್ತೇದಾರ್, ರಾಜಶೇಖರ ಹಿರೇಮಠ, ಶಶಿಕಾಂತ ದಿಕ್ಷಿತ್, ಪ್ರಭಾಕರ್ ಕಲಶೆಟ್ಟಿ, ಯಶವಂತರಾಯ ಪಾಟೀಲ್, ಬ್ರಹ್ಮಾನಂದ ಕುತಳೆ, ಶರಣು ಬಿರಾದಾರ, ಅಣ್ಣಾರಾಯ ದಣ್ಣೂರ, ರವಿ ಮೂಲಿಮನಿ ಸೇರಿದಂತೆ ಹಲವು ನಾಗರೀಕರು ಉಪಸ್ಥಿತರಿದ್ದರು.