ಹೊಸ ದಿಗಂತ ಡಿಜಿಟಲ್ ಡೆಸ್ಕ್:
ಬಾಲಿವುಡ್ ನ ಗ್ಲಾಮರ್ ಲೋಕಕ್ಕೆ ವಿದಾಯ ಹೇಳಿ ಸನ್ಯಾಸ್ಯತ್ವ ಸ್ವೀಕರಿಸಿದ್ದ ಮಮತಾ ಕುಲಕರ್ಣಿ ಮಹಾಮಂಡಲೇಶ್ವರ ಸ್ಥಾನಕ್ಕೆ ರಾಜೀನಾಮೆ ಘೋಷಿಸಿದ್ದಾರೆ.
ಪ್ರಯಾಗ್ ರಾಜ್ ನಲ್ಲಿ ನಡೆಯುತ್ತಿರುವ ಮಹಾಕುಂಭ ಮೇಳಕ್ಕೆ ತೆರಳಿ ವೈರಲ್ ಆದ ನಂತರ ಕಿನ್ನಾರ ಅಖಾಡದದ ಮಹಾಮಂಡಲೇಶ್ವರ ಆದರು. ಈ ಅತ್ಯುನ್ನತ ಸ್ಥಾನವನ್ನು ಪಡೆದಿದ್ದರಿಂದ ಅವರನ್ನು ಅನೇಕ ಜನರು ಮತ್ತು ಭಕ್ತರು ವಿರೋಧಿಸಿದರು. ಇದರಿಂದ ಮನನೊಂದ ಇದೀಗ ಮಹಾಮಂಡಲೇಶ್ವರ ಸ್ಥಾನಕ್ಕೆ ರಾಜೀನಾಮೆ ಘೋಷಿಸಿದ್ದಾರೆ.
ಇನ್ಸ್ಟಾಗ್ರಾಮ್ನಲ್ಲಿ ವಿಡಿಯೋ ಹಂಚಿಕೊಂಡಿರುವ ಮಮತಾ ಕುಲಕರ್ಣಿ, ಮಮತಾ ನಂದಗಿರಿ ಆದನ ನಾನು, ಮಹಾಮಂಡಲೇಶ್ವರ ಹುದ್ದೆಗೆ ರಾಜೀನಾಮೆ ನೀಡಿದ್ದೇನೆ. ಎರಡೂ ಗುಂಪಿನ ನಡುವೆ ನಡೆಯುತ್ತಿರುವ ಜಗಳ ಸರಿಯಲ್ಲ, 25 ವರ್ಷಗಳಿಂದ ನಾನು ಸಾಧ್ವಿಯಾಗಿದ್ದೆ.ಹಾಗೆಯೇ ಉಳಿಯುತ್ತೇನೆ. ಮಹಾಮಂಡಲೇಶ್ವರನಾಗಿ ನನಗೆ ಸಿಕ್ಕಿದ ಗೌರವವು 25 ವರ್ಷಗಳ ಕಾಲ ಈಜು ಕಲಿತು ನಂತರ ಅದನ್ನು ಮಕ್ಕಳಿಗೆ ಕಲಿಸುವಂತೆ ಆಗಿದೆ ಎಂದು ಹೇಳಿದ್ದಾರೆ.
ನನ್ನನ್ನು ಮಹಾಮಂಡಲೇಶ್ವರನಾಗಿ ನೇಮಿಸಿದ ನಂತರ ಆಕ್ರೋಶ ವ್ಯಕ್ತವಾಗುತ್ತಿದೆ. 25 ವರ್ಷಗಳ ಹಿಂದೆ ಬಾಲಿವುಡ್ ತೊರೆದು ಎಲ್ಲದರಿಂದ ದೂರ ಉಳಿದಿದ್ದೆ. ನಾನು ಮಾಡುವ ಪ್ರತಿಯೊಂದಕ್ಕೂ ಜನರು ಹಲವಾರು ಪ್ರತಿಕ್ರಿಯೆ ನೀಡಿದ್ದಾರೆ. ನನ್ನನ್ನು ಮಹಾಮಂಡಳೇಶ್ವರರಾಗಿ ನೇಮಕಗೊಂಡಿದ್ದಕ್ಕೆ ಬಹಳಷ್ಟು ಮಂದಿಗೆ ತೊಂದರೆ ಆಗಿರುವುದನ್ನು ಗಮನಿಸಿದ್ದೇನೆ. ನಾನು ಯಾವುದೇ ಕೈಲಾಸ ಅಥವಾ ಮಾನಸ ಸರೋವರಕ್ಕೆ ಹೋಗಬೇಕಾಗಿಲ್ಲ, ಕಳೆದ 25 ವರ್ಷಗಳ ತಪಸ್ಸಿನಿಂದ ನನ್ನ ಮುಂದೆ ಬ್ರಹ್ಮಾಂಡವಿದೆ ಎಂದು ಅವರು ತಿಳಿಸಿದ್ದಾರೆ.
1990 ರ ದಶಕದ ಪ್ರಸಿದ್ಧ ಬಾಲಿವುಡ್ ನಟಿ ಮಮತಾ, 2000 ರ ದಶಕದ ಆರಂಭದಲ್ಲಿ ಚಿತ್ರೋದ್ಯಮದಿಂದ ದೂರವಿರಲು ನಿರ್ಧರಿಸಿದ್ದರು. ಅವರು ಭಾರತಕ್ಕೆ ಮರಳುವ ಅಥವಾ ಆಧ್ಯಾತ್ಮಿಕ ಕ್ಷೇತ್ರಕ್ಕೆ ತೆರಳುವ ಅವರ ಹಠಾತ್ ನಿರ್ಧಾರವು ಅನೇಕ ಕಳವಳಗಳನ್ನು ಹುಟ್ಟುಹಾಕಿದೆ.