ಹೊಸ ದಿಗಂತ ಡಿಜಿಟಲ್ ಡೆಸ್ಕ್:
ಮಂಗಳೂರು ನಗರದ ಅಡ್ಯಾರ್ ಬಳಿ ಬುಧವಾರ ಮಧ್ಯಾಹ್ನ ಅಪಘಾತಕ್ಕೀಡಾಕಿದ್ದ ನಂದಿನಿ ಡೈರಿ ಉತ್ಪನ್ನಗಳನ್ನು ಸಾಗಿಸುತ್ತಿದ್ದ ವಾಹನದೊಳಗೆ ಸಿಲುಕಿದ್ದ ಡ್ರೈವರ್ ಕಾಲನ್ನು ವಿಧಾನಸಭೆಯ ಸ್ಪೀಕರ್ ಯು. ಟಿ. ಖಾದರ್ ಅವರು ಜನರೊಂದಿಗೆ ಸೇರಿ ಸುರಕ್ಷಿತವಾಗಿ ಹೊರ ತೆಗೆದರು. ಸದ್ಯ ಈ ವಿಡಿಯೋ ಕೂಡಾ ವೈರಲ್ ಆಗುತ್ತಿದ್ದು, ಭಾರೀ ಪ್ರಶಂಸೆ ವ್ಯಕ್ತವಾಗುತ್ತಿದೆ.
ಮಂಗಳೂರು ನಗರದ ಅಡ್ಯಾರ್ ಬಳಿ ನಂದಿನಿ ಡೈರಿ ಉತ್ಪನ್ನಗಳನ್ನು ಸಾಗಿಸುತ್ತಿದ್ದ ಲಾರಿಯೊಂದು ಅಪಘಾತಕ್ಕೀಡಾಗಿತ್ತು, ಇದರಿಂದ ನಜ್ಜುಗುಜ್ಜಾಗಿ ವಾಹನದೊಳಗೆ ಡ್ರೈವರ್ ಕಾಲು ಸಿಲುಕಿಕೊಂಡಿತ್ತು. ಆ ಸಂದರ್ಭದಲ್ಲಿ ಇದೇ ಮಾರ್ಗವಾಗಿ ಬಂಟ್ವಾಳದತ್ತ ಸ್ಪೀಕರ್ ಯುಟಿ ಖಾದರ್ ಹೋಗುತ್ತಿದ್ದರು. ತಕ್ಷಣ ತಮ್ಮ ಕಾರನ್ನು ನಿಲ್ಲಿಸಿ ಅಪಘಾತದ ಸ್ಥಳಕ್ಕೆ ಧಾವಿಸಿದ್ದಾರೆ.
ಡ್ರೈವರ್ ಕಾಲು ವಾಹನದೊಳಗೆ ಸಿಲುಕಿದ್ದನ್ನು ಗಮನಿಸಿದ ಅವರು, ನಜ್ಜುಗುಜ್ಜಾಗಿದ್ದ ವಾಹನದ ಮುಂಭಾಗವನ್ನು ಸ್ಥಳದಲ್ಲಿ ಜಮಾಯಿಸಿದ್ದ ಸಾರ್ವಜನಿಕರ ಸಹಾಯದಿಂದ ಎಳೆದಿದ್ದಾರೆ. ಈ ವೇಳೆ ವಾಹನದೊಳಗೆ ಸಿಲುಕಿದ್ದ ಕಾಲು ಸುರಕ್ಷಿತವಾಗಿ ಹೊರಗೆ ಬಂದಿದ್ದು, ಡ್ರೈವರ್ ಅಪಾಯದಿಂದ ಪಾರಾಗಿದ್ದಾರೆ. ಸಣ್ಣಪುಟ್ಟ ಗಾಯಗೊಂಡಿದ್ದ ಡ್ರೈವರ್ನನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ.