ಹೊಸದಿಗಂತ ಡಿಜಿಟಲ್ ಡೆಸ್ಕ್:
ಶನಿವಾರ ತೆಲಂಗಾಣದ ಎಸ್ಎಲ್ಬಿಸಿ ಸುರಂಗ ಕುಸಿದು ಎಂಟು ಕಾರ್ಮಿಕರು ಅವಶೇಷಗಳೊಳಗೆ ಸಿಲುಕಿಕೊಂಡಿದ್ದು, ಅವರನ್ನು ಹೊರತೆಗೆಯುವ ಕಾರ್ಯ ಭರದಿಂದ ನಡೆಯುತ್ತಿದೆ. ಈ ಕಾರ್ಯಕ್ಕೆ ಇದೀಗ ರ್ಯಾಟ್ ಮೈನರ್ಸ್ ತಂಡ ಜೊತೆಗೂಡಿದ್ದು, ತಂಡದ ಬಲ ಇನ್ನಷ್ಟು ಹೆಚ್ಚಾಗಿದೆ.
ಎರಡು ವರ್ಷಗಳ ಹಿಂದೆ ಉತ್ತರಾಖಂಡದ ಸಿಲ್ಕ್ಯಾರಾ ಸುರಂಗ ಕುಸಿತದ ಸಂಧರ್ಭದಲ್ಲಿ ಇದೆ ರಕ್ಷಣಾ ತಂಡದಲ್ಲಿ ನಿಯೋಜಿಸಲಾಗಿತ್ತು.
ಈ ಬಗ್ಗೆ ತೆಲಂಗಾಣ ಸಚಿವ ಜೂಪಲ್ಲಿ ಕೃಷ್ಣ ರಾವ್ ಮಾತನಾಡಿದ್ದು, ಅವಶೇಷಗಳ ಅಡಿ ಸಿಲುಕಿರುವ ಎಂಟು ಜನರು ಬದುಕುಳಿಯುವ ಸಾಧ್ಯತೆಗಳು ತುಂಬಾ ಕಡಿಮೆ ಇವೆ. ಆದರೂ ಅವರನ್ನು ತಲುಪಲು ಎಲ್ಲಾ ಪ್ರಯತ್ನಗಳನ್ನು ಮಾಡಲಾಗುತ್ತಿದೆ ಎಂದು ಹೇಳಿದ್ದಾರೆ.
ಸಿಲುಕಿರುವ ವ್ಯಕ್ತಿಗಳನ್ನು ರಕ್ಷಿಸಲು ಕನಿಷ್ಠ ಮೂರರಿಂದ ನಾಲ್ಕು ದಿನಗಳು ಬೇಕಾಗಬಹುದು, ಕುಸಿತದ ಸ್ಥಳವು ಮಣ್ಣು ಮತ್ತು ಅವಶೇಷಗಳು ತುಂಬಿ ರಕ್ಷಣಾ ಕಾರ್ಯಾಚರಣೆಗೆ ಅಡ್ಡಿಯಾಗುತ್ತಿದೆ ಎನ್ನಲಾಗಿದೆ.
ಎನ್ ಡಿ ಆರ್ ಎಫ್ ನ 128 ಜನ, ಎಸ್ ಡಿ ಆರ್ ಎಫ್ ನಿಂದ ೧೨೦ ಜನ, ಕಾಲಿರಿಸ್ ನಿಂದ 23 ಜನ ಹಾಗೂ ಸೇನೆಯ 24 ಸೇರಿದಂತೆ ಸುಮಾರು 300 ಜನ ತರಬೇತಿ ಪಡೆದ ಸಿಬ್ಬಂದಿ ಸಿಲುಕಿರುವ ವ್ಯಕ್ತಿಗಳನ್ನು ಹೊರತರಲು ಕಾರ್ಯಾಚರಣೆ ನಡೆಸುತ್ತಿದ್ದಾರೆ.
ಇಲ್ಲಿಯವರೆಗೆ ರಕ್ಷಣಾ ತಂಡವು ಸುರಂಗದೊಳಗೆ 13 ಕಿ.ಮೀ.ಗೂ ಹೆಚ್ಚು ಸ್ಥಳವನ್ನು ಕ್ರಮಿಸಿದ್ದು, ಮುಂದಿನ ನೂರು ಮೀಟರ್ಗಳಲ್ಲಿ ನೀರು ಮತ್ತು ಕೆಸರು ತುಂಬಿದ್ದು ಕಾರ್ಯಾಚರಣೆಗೆ ಅಡಚಣೆಯಾಗುವ ಸಾಧ್ಯತೆ ಇದೆ.