ಹೊಸ ದಿಗಂತ ವರದಿ, ಕಲಬುರಗಿ:
ಕಳೆದ ಎರಡು ವರ್ಷಗಳಿಂದ ಜಿಲ್ಲೆಗಳಲ್ಲಿ ಮಾಡಿದ ಅನುಕರಣೀಯ ಕಾರ್ಯಕ್ಕಾಗಿ ದೇಶಾದ್ಯಂತ ಜಿಲ್ಲಾಧಿಕಾರಿಗಳನ್ನು ಗೌರವಿಸುವ ಮೂರನೇ ದಿ ಇಂಡಿಯನ್ ಎಕ್ಸ್ ಪ್ರೆಸ್ ಎಕ್ಸಲೆನ್ಸ್ ಇನ್ ಗೌರನೆನ್ಸ್ ರಾಷ್ಟ್ರ ಮಟ್ಟದ ಪ್ರಶಸ್ತಿಗೆ ಕಲಬುರಗಿಯ ಜಿಲ್ಲಾಧಿಕಾರಿ ಬಿ ಫೌಜಿಯಾ ತರನ್ನುಮ್ ಅವರು ಭಾಜನರಾಗಿದ್ದಾರೆ.
ರಾಷ್ಟ್ರ ಮಟ್ಟದಲ್ಲಿ 450 ಕ್ಕೂ ಹೆಚ್ಚಿನ ಜಿಲ್ಲಾಧಿಕಾರಿಗಳ ಕಾರ್ಯಗಳನ್ನು ಪರಿಶೀಲಿಸಿದ ತೀರ್ಪುಗಾರರ ತಂಡ ಕಲಬುರಗಿ ಜಿಲ್ಲಾಧಿಕಾರಿ ಫೌಜಿಯಾ ತರನ್ನುಮ್ ಅವರ ಕಾರ್ಯಕ್ಕೆ ಶ್ಲಾಘನೆಯನ್ನು ವ್ಯಕ್ತಪಡಿಸಿ ಪ್ರಶಸ್ತಿಗೆ ಆಯ್ಕೆ ಮಾಡಲಾಗಿದೆ ಎಂದು ದಿ ಇಂಡಿಯನ್ ಎಕ್ಸ್ ಪ್ರೆಸ್ ಗ್ರೂಪ್ ತಿಳಿಸಿದೆ.
ತೀರ್ಪುಗಾರರ ವಿಶೇಷ ವಿಭಾಗದ ಈ ಪ್ರಶಸ್ತಿಯು ಜಿಲ್ಲಾಧಿಕಾರಿಗಳ ಸಮಗ್ರ ಕಾರ್ಯ ಮತ್ತು ಜನರ ಜೀವನವನ್ನು ಸುಧಾರಿಸಲು ಹಾಗೂ ಬದಲಾವಣೆಯ ಪ್ರಮುಖ ಸಾಧನವಾಗಲು ಅರ್ಥಪೂರ್ಣ ಕೊಡುಗೆ ನೀಡಲು ಕಲಬುರಗಿ ಜಿಲ್ಲೆಯಲ್ಲಿ ಸೇವೆ ಸಲ್ಲಿಸುತ್ತಿರುವ ಫೌಜಿಯಾ ತರನ್ನುಮ್ ಅವರ ಕೆಲಸ ಸಾಕ್ಷಿಯಾಗಿದೆ.
ಮಾದರಿಯ ಉತ್ತಮ ಕೆಲಸವನ್ನು ಮುಂದುವರೆಸಲು ಮತ್ತು ನಿಮ್ಮ ಸಹೋದ್ಯೋಗಿಗಳಿಗೆ ಹಾಗೂ ಇತರರಿಗೆ ಉದಾಹರಣೆಯಾಗಿ ಕಾರ್ಯನಿರ್ವಹಿಸಲು ಇತರರನ್ನು ಪ್ರೇರೇಪಿಸುತ್ತದೆ ಎಂದು ಸಂಸ್ಥೆ ಹರ್ಷ ವ್ಯಕ್ತಪಡಿಸಿದೆ.
ರಾಷ್ಟ್ರಮಟ್ಟದ ಈ ಪ್ರಶಸ್ತಿ ಪ್ರದಾನ ಸಮಾರಂಭವು ಇಂದು ನವದೆಹಲಿಯ ಹೊಟೇಲ್ ಐಟಿಸಿ ಮೌರ್ಯದಲ್ಲಿ ಜರುಗಿತು. ಮುಖ್ಯ ಅತಿಥಿಯಾಗಿ ಕೇಂದ್ರ ರೈಲು, ಮಾಹಿತಿ ಮತ್ತು ಪ್ರಸಾರ, ಎಲೆಕ್ಟ್ರಾನಿಕ್ ಹಾಗೂ ಮಾಹಿತಿ ತಂತ್ರಜ್ಞಾನ ಸಚಿವ ಅಶ್ನಿನಿ ವೈಷ್ಣವ್ ಅವರು ಪಾಲ್ಗೊಂಡು ಪ್ರಶಸ್ತಿ ಪ್ರದಾನ ಮಾಡಿದರು ಎಂದು ಪ್ರಕಟಣೆ ತಿಳಿಸಿದೆ.