ಸನಾತನ ಧರ್ಮದ ಕುರಿತು ಹೇಳಿಕೆ | ಉದಯನಿಧಿ ಸ್ಟಾಲಿನ್ ವಿರುದ್ಧ ಅನುಮತಿಯಿಲ್ಲದೆ ಹೊಸ ಕೇಸ್ ದಾಖಲಿಸಬಾರದು: ಸುಪ್ರೀಂ

ಹೊಸ ದಿಗಂತ ಡಿಜಿಟಲ್ ಡೆಸ್ಕ್:

ಸನಾತನ ಧರ್ಮದ ಕುರಿತು ಹೇಳಿಕೆ ನೀಡಿದ್ದ ತಮಿಳುನಾಡು ಉಪಮುಖ್ಯಮಂತ್ರಿ ಉದಯನಿಧಿ ಸ್ಟಾಲಿನ್ ವಿರುದ್ಧ ನ್ಯಾಯಾಲಯದ ಅನುಮತಿಯಿಲ್ಲದೆ ಯಾವುದೇ ಹೊಸ ಪ್ರಕರಣಗಳನ್ನು ದಾಖಲಿಸಬಾರದು ಎಂದು ಸುಪ್ರೀಂ ಕೋರ್ಟ್ ಆದೇಶಿಸಿದೆ.

2023ರ ಸೆಪ್ಟೆಂಬರ್‌ನಲ್ಲಿ ಉದಯನಿಧಿ ಸ್ಟಾಲಿನ್ ಅವರು ಸನಾತನ ಧರ್ಮವನ್ನು `ಡೆಂಗ್ಯೂ ಮತ್ತು ಮಲೇರಿಯಾ’ಗೆ ಹೋಲಿಸಿ ಅದರ ನಿರ್ಮೂಲನೆಗೆ ಕರೆ ನೀಡುವ ಮೂಲಕ ಚರ್ಚೆಗೆ ಕಾರಣವಾಗಿದ್ದರು.

ಬಳಿಕ ವಿವಿಧ ರಾಜ್ಯಗಳಲ್ಲಿ ತಮ್ಮ ವಿರುದ್ಧ ದಾಖಲಾಗಿರುವ ಬಹು ಎಫ್‌ಐಆರ್‌ಗಳನ್ನು ಕ್ರೋಢೀಕರಿಸುವಂತೆ ಕೋರಿ ಸ್ಟಾಲಿನ್ ಸಲ್ಲಿಸಿದ್ದ ಅರ್ಜಿಯ ವಿಚಾರಣೆಯ ಸಂದರ್ಭ ಈ ಆದೇಶ ಹೊರಡಿಸಿದೆ.

ಉದಯನಿಧಿ ಸ್ಟಾಲಿನ್ ಪರ ವಾದ ಮಂಡಿಸಿದ ಹಿರಿಯ ವಕೀಲ ಎ.ಎಂ. ಸಿಂಘ್ವಿ, ಹಲವಾರು ರಾಜ್ಯಗಳಲ್ಲಿ ಅಸ್ತಿತ್ವದಲ್ಲಿರುವ ಎಫ್‌ಐಆರ್‌ಗಳ ಜೊತೆಗೆ ಬಿಹಾರದಲ್ಲಿ ಹೊಸ ದೂರು ದಾಖಲಾಗಿದೆ ಎಂದು ಪೀಠಕ್ಕೆ ತಿಳಿಸಿದರು.

ನ್ಯಾಯಾಲಯವು ದೃಢವಾಗಿ ಪ್ರತಿಕ್ರಿಯಿಸಿ, ನೀವು ಹೊಸ ದೂರುಗಳನ್ನು ಸಲ್ಲಿಸುತ್ತಲೇ ಇರಲು ಸಾಧ್ಯವಿಲ್ಲ ಎಂದು ಹೇಳಿತು.

ಕಳೆದ ವಿಚಾರಣೆಯ ಸಮಯದಲ್ಲಿ, ತಮಿಳುನಾಡಿಗೆ ಅಲ್ಲದಿದ್ದರೆ ಕರ್ನಾಟಕಕ್ಕೆ ಪ್ರಕರಣಗಳನ್ನು ವರ್ಗಾಯಿಸುವ ಸಾಧ್ಯತೆಯನ್ನು ಪರಿಗಣಿಸಲಾಗಿತ್ತು. ನೂಪುರ್ ಶರ್ಮಾ ಅವರ ತೀರ್ಪು ಸೇರಿದಂತೆ ಇದೇ ರೀತಿಯ ಪ್ರಕರಣಗಳಲ್ಲಿ ಸುಪ್ರೀಂ ಕೋರ್ಟ್ ನೀಡಿದ ಹಿಂದಿನ ತೀರ್ಪುಗಳನ್ನು ಉಲ್ಲೇಖಿಸಿದ ಸಿಂಘ್ವಿ, ಸ್ಟಾಲಿನ್ ಅವರ ಹೇಳಿಕೆಗಳು ಹೋಲಿಸಿದರೆ ಕಡಿಮೆ ಆಕ್ರಮಣಕಾರಿ ಎಂದು ವಾದಿಸಿದರು.

ಸಾಲಿಸಿಟರ್ ಜನರಲ್ ತುಷಾರ್ ಮೆಹ್ತಾ ವಾದಿಸಿ, ಸನಾತನ ಧರ್ಮ ನಿರ್ಮೂಲನಾ ಸಮ್ಮೇಳನದಲ್ಲಿ ಈ ಹೇಳಿಕೆಗಳನ್ನು ನೀಡಲಾಗಿದೆ. ಇವರು ಇದೇ ರೀತಿಯ ಹೇಳಿಕೆ ಬೇರೆ ಧರ್ಮಗಳ ಬಗ್ಗೆ ನೀಡಿದ್ದಾರೆಯೇ ಗಮನಸೆಳೆದರು.

ವಾದ ಆಲಿಸಿದ ಪೀಠವು ಉದಯನಿಧಿ ಸ್ಟಾಲಿನ್ ಅವರ ಅರ್ಜಿಯ ಕುರಿತು ನೋಟಿಸ್ ಜಾರಿಗೊಳಿಸಿತು ಮತ್ತು ಹಿಂದೆ ನೀಡಲಾದ ಮಧ್ಯಂತರ ರಕ್ಷಣೆಯನ್ನು ವಿಸ್ತರಿಸಿತು.

ಬಿಹಾರ ಸೇರಿದಂತೆ ಎಫ್‌ಐಆರ್‌ಗಳು ದಾಖಲಾಗಿರುವ ರಾಜ್ಯಗಳನ್ನು ಪ್ರಕರಣದಲ್ಲಿ ಪಕ್ಷಗಳನ್ನಾಗಿ ಮಾಡಲು ಅನುಮತಿಸಲಾಗಿದೆ ಮತ್ತು ಅವರ ಪ್ರತಿಕ್ರಿಯೆಯನ್ನು ಕೋರಲಾಗಿದೆ. ಈ ವಿಷಯವನ್ನು ಏಪ್ರಿಲ್ 28 ರಿಂದ ಪ್ರಾರಂಭವಾಗುವ ವಾರದಲ್ಲಿ ವಿಚಾರಣೆಗೆ ಪಟ್ಟಿ ಮಾಡಲಾಗಿದೆ. ಮುಂದಿನ ಪ್ರಕರಣಗಳು ಜಾರಿಯಲ್ಲಿರದಂತೆ ತಡೆಯುವ ಮಧ್ಯಂತರ ಆದೇಶವಿದೆ ಎಂದು ಸುಪ್ರೀಂ ಕೋರ್ಟ್ ತಿಳಿಸಿದೆ.

 

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!