ಹೊಸದಿಗಂತ ಡಿಜಿಟಲ್ ಡೆಸ್ಕ್:
ನಾಗ್ಪುರ ನಗರದಲ್ಲಿ ಭುಗಿಲೆದ್ದಿರುವ ಹಿಂಸಾಚಾರವನ್ನು ಹತೋಟಿಗೆ ತರುವ ಮೊದಲೇ ಮತ್ತೊಂದು ಹಿಂಸಾಚಾರ ವರದಿಯಾಗಿದೆ. ಹೀಗಾಗಿ ನಾಗುರದಲ್ಲಿ ನಿಷೇಧಾಜ್ಞೆ ಜಾರಿಗೊಳಿಸಲಾಗಿದೆ.
ನಾಗ್ಪುರದಲ್ಲಿ ಭಾರತೀಯ ನಾಗರಿಕ ಸುರಕ್ಷಾ ಸಂಹಿತೆಯ ಸೆಕ್ಷನ್ 163 (ಮಾನವ ಜೀವಕ್ಕೆ ಅಪಾಯ, ಸಾರ್ವಜನಿಕ ಗೊಂದಲ ಅಥವಾ ಗಲಭೆಗಳನ್ನು ತಡೆಗಟ್ಟಲು ತುರ್ತು ಪ್ರಕರಣಗಳಲ್ಲಿ ತಕ್ಷಣದ ಆದೇಶಗಳನ್ನು ಹೊರಡಿಸಲು ಮ್ಯಾಜಿಸ್ಟ್ರೇಟ್ಗಳಿಗೆ ಅಧಿಕಾರ ನೀಡುವುದು) ಅನ್ನು ವಿಧಿಸಲಾಗಿದೆ.
ಮೊಫಲ್ ದೊರೆ ಔರಂಗಜೇಬ್ ಸಮಾಧಿ ತೆರವುಗೊಳಿಸುವಂತೆ ಆಗ್ರಹಿಸಿ ಬಜರಂಗದಳದ ಸದಸ್ಯರು ನಡೆಸಿದ ಪ್ರತಿಭಟನೆ ವೇಳೆ, ಮುಸ್ಲಿಂ ಸಮುದಾಯದ ಪವಿತ್ರ ಗ್ರಂಥ ಕುರಾನ್ ಅನ್ನು ಸುಟ್ಟುಹಾಕಲಾಗಿದೆ ಎಂಬ ವದಂತಿ ಹಬ್ಬಿದ ಪರಿಣಾಮ ನಾಗ್ಪುರದ ಕೇಂದ್ರ ಭಾಗದಲ್ಲಿ ಹಿಂಸಾಚಾರ ಭುಗಿಲೆದ್ದಿತ್ತು.
ಹಂಸಪುರಿ ಪ್ರದೇಶದಲ್ಲಿ ಸೋಮವಾರ ರಾತ್ರಿ ಮನೆಗೆ ಕಲ್ಲು ತೂರಾಟ ನಡೆಸಿದ್ದ ಉದ್ರಿಕ್ತರು, ಮನೆಯ ಮುಂದೆ ನಿಲ್ಲಿಸಿದ್ದ ನಾಲ್ಕು ದ್ವಿಚಕ್ರ ವಾಹನಗಳಿಗೆ ಬೆಂಕಿ ಹಚ್ಚಿದ್ದಾರೆ. ಈ ಪ್ರದೇಶದಲ್ಲಿ ಪೊಲೀಸರನ್ನು ನಿಯೋಜಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.