ಹೊಸದಿಗಂತ ಡಿಜಿಟಲ್ ಡೆಸ್ಕ್:
ಶುಕ್ರವಾರ ಸಂಭವಿಸಿದ ಭೂಕಂಪನದಿಂದಾಗಿ ಮ್ಯಾನ್ಮಾರ್ ಮತ್ತು ಥಾಯ್ಲೆಂಡ್ ತತ್ತರಿಸಿವೆ. ಭೂಕಂಪನದಿಂದಾಗಿ ಮ್ಯಾನ್ಮಾರ್ನಲ್ಲಿ ಈವರೆಗೆ ಮೃತರ ಸಂಖ್ಯೆ 1000 ದಾಟಿದೆ. ಇನ್ನು, 1600ಕ್ಕೂ ಅಧಿಕ ಜನರು ಗಾಯಗೊಂಡಿದ್ದಾರೆ ಎಂದು ಸರ್ಕಾರ ಮಾಹಿತಿ ನೀಡಿದೆ.
ಶುಕ್ರವಾರ ಭೂಮಿ ಕಂಪಿಸುತ್ತಿದ್ದಂತೆ ಕಟ್ಟಡಗಳಿಂದ ಜನರು ಹೊರಗಡೆ ಓಡಿ ಬಂದಿದ್ದರು. ಬಳಿಕ ಆಶ್ರಯ ಪಡೆಯಲು ಪರದಾಡಿದರು. ಮ್ಯಾನ್ಮಾರ್ ಸರ್ಕಾರವು ಆರು ಪ್ರದೇಶಗಳಲ್ಲಿ ತುರ್ತು ಪರಿಸ್ಥಿತಿಯನ್ನು ಘೋಷಿಸಿದೆ. ಇತ್ತ ಭಾರತ ಮ್ಯಾನ್ಮಾರ್ ನೆರವಿಗೆ ನಿಂತಿದ್ದು ಆಪರೇಷನ್ ಬ್ರಹ್ಮ ಮೂಲಕ ವಿಮಾನದಲ್ಲಿ ಕೆಲ ವಸ್ತುಗಳನ್ನು ಕಳಿಸಿದೆ.
ಸಂತ್ರಸ್ತರಿಗಾಗಿ ಟೆಂಟ್, ಕಂಬಳಿಗಳು, ಬ್ಲಾಂಕೆಟ್ಸ್, ನೆಲಹಾಸಿಗೆ, ಆಹಾರದ ಪೊಟ್ಟಣಗಳು, ವೈದ್ಯಕೀಯ ಕಿಟ್, ಜನರೇಟ್ಗಳು, ನೀರು ಶುದ್ಧೀಕರಣ ಯಂತ್ರಗಳು ಹಾಗೂ ಸೌರ ದೀಪಗಳು ಸೇರಿದಂತೆ 15 ಟನ್ನಷ್ಟು ಪರಿಹಾರ ಸಾಮಗ್ರಿಗಳನ್ನು ಮ್ಯಾನ್ಮಾರ್ಗೆ ಭಾರತ ಮೊದಲ ಹಂತದಲ್ಲಿ ಕಳುಹಿಸಿದೆ.
ಈಗಾಗಲೇ ಪರಿಹಾರ ಸಾಮಗ್ರಿಗಳು ಯಂಗಾನ್ ತಲುಪಿವೆ ಎಂದು ವಿದೇಶಾಂಗ ವ್ಯವಹಾರಗಳ ಸಚಿವಾಲಯ ಮಾಹಿತಿ ನೀಡಿದೆ. ಮ್ಯಾನ್ಮಾರ್ ಮತ್ತು ಥಾಯ್ಲೆಂಡ್ಗೆ ಅಗತ್ಯ ಎಲ್ಲ ಸಹಕಾರ ನೀಡುವುದಾಗಿ ಪ್ರಧಾನಿ ನರೇಂದ್ರ ಮೋದಿ ಅವರು ಶುಕ್ರವಾರ ಭರವಸೆ ನೀಡಿದ್ದರು.