ಹೊಸದಿಗಂತ ವರದಿ ಶಿವಮೊಗ್ಗ:
ಮಹಾನಗರ ಪಾಲಿಕೆ ವ್ಯಾಪ್ತಿಯಲ್ಲಿ ಬೀಡಾಡಿ ಹಂದಿಗಳು ಹೆಚ್ಚಾಗಿದ್ದು, ಅನೈರ್ಮಲ್ಯತೆ, ಪರಿಸರ ಮಾಲಿನ್ಯ, ಹಂದಿ ಜ್ವರ ಮತ್ತು ಮೆದುಳು ಜ್ವರದಂತಹ ರೋಗಗಳು ಹರಡುವ ಸಾಧ್ಯತೆಗಳು ಹೆಚ್ಚಾಗಿದೆ ಎಂದು ಸಾರ್ವಜನಿಕರು ಹಂದಿ ಸಾಕಾಣಿಕೆ ಮಾಲೀಕರ ವಿರುದ್ಧ ಉಪಲೋಕಾಯುಕ್ತರು ಜಿಲ್ಲೆಗೆ ಭೇಟಿ ನೀಡಿದ ಸಂದರ್ಭದಲ್ಲಿ ದೂರು ನೀಡಿದ್ದಾರೆ.
ಹಂದಿ ಸಾಕಾಣಿಕೆ ಮಾಡಬಾರದೆಂದು ನಿರ್ದೇಶಿಸಿ ಪಾಲಿಕೆಯು ಈ ಹಿಂದೆ ಅನೇಕ ಬಾರಿ ಪತ್ರಿಕಾ ಪ್ರಕಟಣೆ ಹೊರಡಿಸಿದ್ದು, ಹಂದಿ ಮಾಲೀಕರು ಯಾವುದೇ ರೀತಿಯ ಕ್ರಮ ವಹಿಸಿರುವುದಿಲ್ಲ. ಪಾಲಿಕೆ ಆಯುಕ್ತರ ಅನುಮತಿ ಇಲ್ಲದೆ ಹಂದಿಗಳನ್ನು ಸಾಕುತ್ತಿರುವುದು ಕ.ಪೌ.ನಿ.ಅಧಿನಿಯಮ 1976 ಕಲಂ 344 ಮತ್ತು 345ರನ್ವಯ ಕಾನೂನು ಬಾಹಿರವಾಗಿದೆ. ನಗರ ವ್ಯಾಪ್ತಿಯಲ್ಲಿ ಹಂದಿಗಳನ್ನು ಸಾಕಿದ್ದಲ್ಲಿ ತಮ್ಮ ಎಲ್ಲಾ ಹಂದಿಗಳನ್ನು 3 ದಿನಗಳೊಳಗೆ ಖಾಲಿ ಮಾಡತಕ್ಕದ್ದು, ತಪ್ಪಿದ್ದಲ್ಲಿ ನಗರ ವ್ಯಾಪ್ತಿಯಲ್ಲಿರುವ ಹಂದಿಗಳನ್ನು ಬೀಡಾಡಿ ಹಂದಿಗಳೆಂದು ಪರಿಗಣಿಸಿ ಸಾರ್ವಜನಿಕರ ಹಿತಾಸಕ್ತಿಯ ಮೇರೆಗೆ ಕಾನೂನು ಪ್ರಕಾರ ಕ್ರಮ ಕೈಗೊಳ್ಳಲಾಗುವುದು ಹಾಗೂ ಇದರಿಂದ ಆಗುವ ಯಾವುದೇ ನಷ್ಟಕ್ಕೆ ಪಾಲಿಕೆ ಜವಾಬ್ದಾರರಲ್ಲ ಎಂದು ಪಾಲಿಕೆ ಆಯುಕ್ತರು ಹಂದಿ ಸಾಕಾಣಿಕೆ ಮಾಲೀಕರಿಗೆ ಎಚ್ಚರಿಕೆ ನೀಡಿದ್ದಾರೆ.