ಹೊಸದಿಗಂತ ಡಿಜಿಟಲ್ ಡೆಸ್ಕ್:
ಬಾವಿ ಸ್ವಚ್ಛಗೊಳಿಸುವಾಗ ಸೋರಿಕೆಯಾದ ವಿಷಕಾರಿ ಅನಿಲ ಸೇವನೆಯಿಂದ ಕನಿಷ್ಠ ಎಂಟು ಜನರು ಉಸಿರುಗಟ್ಟಿ ಸಾವನ್ನಪ್ಪಿರುವ ದುರ್ಘಟನೆ ಮಧ್ಯಪ್ರದೇಶದ ಕೊಂಡಾವತ್ನಲ್ಲಿ ನಡೆದಿದೆ.
ಗಂಗೌರ್ ಮಾತಾ ವಿಶೇಷ ಆಚರಣೆಗಾಗಿ ಛೈಗಾಂವ್ ಮಖಾನ್ ಪ್ರದೇಶದಲ್ಲಿನ ಬಾವಿ ಸ್ವಚ್ಛ ಮಾಡುವಾಗ ಈ ದುರಂತ ಸಂಭವಿಸಿದೆ.
ಆರಂಭದಲ್ಲಿ ಇಬ್ಬರು ಬಾವಿಯೊಳಗೆ ಇಳಿದು ಸ್ವಚ್ಛತಾ ಕಾರ್ಯದಲ್ಲಿ ಭಾಗಿಯಾಗಿದ್ದರು. ಅವರು ಉಸಿರುಗಟ್ಟಿದಾಗ ರಕ್ಷಣೆಗೆ ಇನ್ನೂ ಆರು ಮಂದಿ ಬಾವಿಯೊಳಗೆ ಇಳಿದಿದ್ದಾರೆ. ಅವರೂ ಕೂಡ ಹೊರಬರಲಾಗದೆ ಉಸಿರುಗಟ್ಟಿ ಸಾವನ್ನಪ್ಪಿದ್ದಾರೆ ಎಂದು ವರದಿಯಾಗಿದೆ.
ಘಟನೆಯಿಂದ ಸ್ಥಳದಲ್ಲಿ ಆತಂಕ ಪರಿಸ್ಥಿತಿ ನಿರ್ಮಾಣವಾಗಿತ್ತು. ಮಾಹಿತಿ ತಿಳಿದ ತಕ್ಷಣ ಸ್ಥಳಕ್ಕಾಗಮಿಸಿದ ಪೊಲೀಸ್ ಮತ್ತು ಎಸ್ಡಿಇಆರ್ಎಫ್ ಸಿಬ್ಬಂದಿ ರಕ್ಷಣಾ ಕಾರ್ಯಾಚರಣೆ ನಡೆಸಿದ್ದಾರೆ. ಘಟನೆ ಹಿನ್ನೆಲೆಯಲ್ಲಿ ಬಾವಿಯ ಸುತ್ತ ಜನಸಮೂಹವೇ ಜಮಾಯಿಸಿತ್ತು. ಘಟನೆಯು ಗ್ರಾಮಸ್ಥರಲ್ಲಿ ಭೀತಿ ಮೂಡಿಸಿದೆ.
ಬಾವಿಯಲ್ಲಿನ ವಿಷಕಾರಿ ಅನಿಲದಿಂದಾಗಿ ರಕ್ಷಣಾ ಸಿಬ್ಬಂದಿಯೂ ಕೂಡ ಆರಂಭದಲ್ಲಿ ತೊಂದರೆ ಅನುಭವಿಸಿದರು. ಆಕ್ಸಿಜನ್ ಮಾಸ್ಕ್ ನೆರವಿನಿಂದ ಬಾವಿಯೊಳಗೆ ಇಳಿದು, ಮೃತದೇಹಗಳನ್ನು ಹೊರತೆಗೆದರು ಎಂದು ಮೂಲಗಳು ತಿಳಿಸಿವೆ.