ಹೊಸದಿಗಂತ ಡಿಜಿಟಲ್ ಡೆಸ್ಕ್:
ಬೆಂಗಳೂರಿನ ಪರಮ್ ಕಲ್ಚರ್ ವತಿಯಿಂದ ಏಪ್ರಿಲ್ ೨೫ ರಂದು ಸಂಜೆ ೬.೩೦ ಕ್ಕೆ ಚೌಡಯ್ಯ ಮೆಮೋರಿಯಲ್ ಹಾಲ್ ನಲ್ಲಿ ಸ್ವಾಮಿ ವಿವೇಕಾನಂದರ ಜೀವನ, ಕೃತಿ ಆಧಾರಿತ “ವೀರ ಸಂನ್ಯಾಸಿಯ ಆತ್ಮ ಗೀತೆ” (The Song of the Sannyasi) ಕಾರ್ಯಕ್ರಮ ನಡೆಯಲಿದೆ .
ಈ ಸಂದರ್ಭ ಸುಮಾರು 35ಕ್ಕೂ ಅಧಿಕ ಅಂತಾರಾಷ್ಟ್ರೀಯ ಖ್ಯಾತಿಯ ಕಲಾವಿದರು, ಸ್ವತಃ ಸ್ವಾಮಿ ವಿವೇಕಾನಂದರಿಂದಲೇ ಇಂಗ್ಲಿಷ್, ಬಂಗಾಳಿ, ಸಂಸ್ಕೃತದಲ್ಲಿ ರಚಿಸಲ್ಪಟ್ಟ ಹಾಡುಗಳನ್ನು ಹಾಗೂ ಕನ್ನಡ ಸಾರಸ್ವತ ಲೋಕದ ರತ್ನಗಳಾದ, ಜಿ.ಎಸ್.ಶಿವರುದ್ರಪ್ಪ, ಕುವೆಂಪು ಸೇರಿದಂತೆ ಹಲವು ಪ್ರಖ್ಯಾತ ಕವಿಗಳು ವಿವೇಕಾನಂದರ ಬಗ್ಗೆ ಬರೆದ ಹಾಡುಗಳನ್ನು ಸಂಗೀತ, ನೃತ್ಯ, ನಾಟಕಗಳ ಮೂಲಕ ಪ್ರದರ್ಶಿಸಲಿದ್ದಾರೆ.
ಸ್ವಾಮಿ ವಿವೇಕಾನಂದರ ತತ್ತ್ವ- ಆದರ್ಶಗಳನ್ನು ಮನೆ ಮನೆಗೂ ತಲುಪಿಸುವ ಸಲುವಾಗಿ ‘ಪರಮ್’ ಈ ಕಾರ್ಯಕ್ರಮವನ್ನು ಆಯೋಜಿಸಿದ್ದು, ಪ್ರಖ್ಯಾತ ಸಂಗೀತ ಸಂಯೋಜಕರಾದ ಪಂ. ಪ್ರವೀಣ್ ಡಿ. ರಾವ್, ಹಾಗೂ ಚಲನಚಿತ್ರ ನಿರ್ದೇಶಕರಾದ ಕಾರ್ತಿಕ್ ಸರಗೂರು ಸಾರಥ್ಯದಲ್ಲಿ ನಡೆಯುತ್ತಿದೆ.
ಜನವರಿಯಲ್ಲಿ ಪ್ರದರ್ಶಿಸಲ್ಪಟ್ಟಿದ್ದ “ವೀರ ಸಂನ್ಯಾಸಿಯ ಆತ್ಮಗೀತೆ” ಕಂಡ ಅಭೂತಪೂರ್ವ ಯಶಸ್ಸಿನಿಂದಾಗಿ, ಪ್ರೇಕ್ಷಕರ ಬೇಡಿಕೆಯ ಮೇರೆಗೆ ಈಗ ಮರುಪ್ರದರ್ಶನ ಕಾಣುತ್ತಿದೆ.