ಹೊಸದಿಗಂತ ಡಿಜಿಟಲ್ ಡೆಸ್ಕ್:
ಉತ್ತರಾಖಂಡದ ಪೌರಿ ಜಿಲ್ಲೆಯ ಧುಮಾಕೋಟ್ ಪ್ರದೇಶದ ಪಿಪ್ಲಿ-ಭವನ್ ರಸ್ತೆಯಲ್ಲಿ ಪಿಕಪ್ ವಾಹನವೊಂದು ಆಳವಾದ ಕಂದಕಕ್ಕೆ ಉರುಳಿ ಬಿದ್ದ ಪರಿಣಾಮ ಒಬ್ಬ ವ್ಯಕ್ತಿ ಸಾವನ್ನಪ್ಪಿದ್ದು, ಮತ್ತೊಬ್ಬ ಗಾಯಗೊಂಡಿರುವ ಘಟನೆ ನಡೆದಿದೆ.
ಅಪೋಲಾ ಗ್ರಾಮದ ನಿವಾಸಿ ವಿನೋದ್ ಸಿಂಗ್ ರಾವತ್ (40) ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಧೂಮಾಕೋಟ್ ನಿಂದ ಅಪೋಲಾಗೆ ತೆರಳುತ್ತಿದ್ದ ವಾಹನವು ಇದ್ದಕ್ಕಿದ್ದಂತೆ ನಿಯಂತ್ರಣ ತಪ್ಪಿ ಕಮರಿಗೆ ಉರುಳಿ ಬಿದ್ದಿದೆ. ಅಪಘಾತದ ಸಮಯದಲ್ಲಿ ಇಬ್ಬರು ವಾಹನದಲ್ಲಿದ್ದರು ಎನ್ನಲಾಗಿದೆ. ಗಾಯಗೊಂಡ ವ್ಯಕ್ತಿಯನ್ನು ಪೌರಿಯ ತಲಕಂಡೈ ಗ್ರಾಮದ ನಿವಾಸಿ ಭೂಪೇಂದ್ರ ಸಿಂಗ್ (56) ಎಂದು ಗುರುತಿಸಲಾಗಿದೆ. ಅವರನ್ನು ಸ್ಥಳೀಯರು ರಕ್ಷಿಸಿ ಆಸ್ಪತ್ರೆಗೆ ದಾಖಲಿಸಿದ್ದಾರೆ.
ಧೂಮಾಕೋಟ್ ಪೊಲೀಸ್ ಠಾಣೆಯಿಂದ ಮಾಹಿತಿ ಪಡೆದ ನಂತರ, ರಾಜ್ಯ ವಿಪತ್ತು ನಿರ್ವಹಣಾ ಪಡೆಯ ತಂಡವು ರಕ್ಷಣಾ ಸಲಕರಣೆಗಳೊಂದಿಗೆ ಸ್ಥಳಕ್ಕೆ ತಲುಪಿದ್ದು. ಶವವನ್ನು ಹೊರತೆಗೆದು ಅದನ್ನು ಜಿಲ್ಲಾ ಪೊಲೀಸರಿಗೆ ಹಸ್ತಾಂತರಿಸಿದ್ದಾರೆ.