ಹಿಂದು ಧರ್ಮದಲ್ಲಿ ಮಂತ್ರಗಳಿಗೆ ಹೆಚ್ಚಿನ ಪ್ರಾಮುಖ್ಯತೆ ನೀಡಲಾಗಿದೆ. ಅದರಲ್ಲೂ ಮುಖ್ಯವಾಗಿ ಗಾಯತ್ರಿ ಮಂತ್ರದ ಬಗ್ಗೆ ಹೇಳುವುದಾದರೆ, ಇದನ್ನು ಎಲ್ಲಾ ವೈದಿಕ ಮಂತ್ರಗಳ ಮೂಲ ಎಂದು ಪರಿಗಣಿಸಲಾಗಿದೆ. ಪ್ರತಿದಿನ ಬೆಳಿಗ್ಗೆ ಗಾಯತ್ರಿ ಮಂತ್ರ ಪಠಿಸುವುದರಿಂದ ಏನೆಲ್ಲಾ ಅರೋಗ್ಯ ಲಾಭಗಳಿವೆ ಅನ್ನೋದನ್ನು ನೋಡೋಣ.
ಒತ್ತಡ ಮತ್ತು ಆತಂಕವನ್ನು ಕಡಿಮೆ ಮಾಡುತ್ತದೆ
ಗಾಯತ್ರಿ ಮಂತ್ರವು ‘ಓಂ’ ಅಕ್ಷರದೊಂದಿಗೆ ಪ್ರಾರಂಭವಾಗುತ್ತದೆ. ಈ ಅಕ್ಷರದ ಕಂಪನಗಳು ಮನಸ್ಸನ್ನು ಶಾಂತಗೊಳಿಸಲು ಮತ್ತು ವಿಶ್ರಾಂತಿಯನ್ನು ನೀಡುವ ಹಾರ್ಮೋನುಗಳನ್ನು ಬಿಡುಗಡೆ ಮಾಡಲು ಸಹಾಯ ಮಾಡುತ್ತದೆ.
ಸ್ಮರಣಶಕ್ತಿ ಮತ್ತು ಏಕಾಗ್ರತೆಯನ್ನು ಹೆಚ್ಚಿಸುತ್ತದೆ
ಗಾಯತ್ರಿ ಮಂತ್ರವನ್ನು ಪ್ರತಿದಿನ ಪಠಿಸುವುದರಿಂದ ಸ್ಮರಣಶಕ್ತಿ ಮತ್ತು ಏಕಾಗ್ರತೆಯ ಶಕ್ತಿಯಲ್ಲಿ ಸಕಾರಾತ್ಮಕ ಸುಧಾರಣೆ ಕಂಡುಬರುತ್ತದೆ. ಪ್ರತಿದಿನ ಯಾವುದೇ ರೀತಿಯ ಮಂತ್ರವನ್ನು ಪಠಿಸುವವರ ಏಕಾಗ್ರತೆ ಮತ್ತು ಸ್ಮರಣಶಕ್ತಿಯು ಇತರರಿಗೆ ಹೋಲಿಸಿದರೆ ತೀಕ್ಷ್ಣವಾಗಿರುತ್ತದೆ.
ರೋಗನಿರೋಧಕ ಶಕ್ತಿ ಹೆಚ್ಚಿಸುತ್ತದೆ
ಪ್ರತಿದಿನ ಗಾಯತ್ರಿ ಮಂತ್ರವನ್ನು ಪಠಿಸುವುದರಿಂದ ನಮ್ಮ ದೇಹದಲ್ಲಿ ಉತ್ಪತ್ತಿಯಾಗುವ ಕಂಪನಗಳು ಹೈಪೋಥಾಲಮಸ್ ಗ್ರಂಥಿಯನ್ನು ಉತ್ತೇಜಿಸುವ ಕೆಲಸ ಮಾಡುತ್ತದೆ. ಈ ಗ್ರಂಥಿಯು ದೇಹದ ಅನೇಕ ಕಾರ್ಯಗಳನ್ನು ನಿರ್ವಹಿಸುವುದರ ಜೊತೆಗೆ ನಮ್ಮ ರೋಗನಿರೋಧಕ ಶಕ್ತಿಗೂ ಕಾರಣವಾಗಿದೆ.
ಹೃದಯದ ಆರೋಗ್ಯ ಕಾಪಾಡಿಕೊಳ್ಳಲು ಸಹಕಾರಿ
ಪ್ರತಿದಿನ ಗಾಯತ್ರಿ ಮಂತ್ರವನ್ನು ಪಠಿಸುವುದರಿಂದ ಮನುಷ್ಯನ ಉಸಿರಾಟ ನಿಧಾನವಾಗುತ್ತದೆ. ಇದು ಹೃದಯ ಬಡಿತಗಳನ್ನು ನಿಯಂತ್ರಿಸಲು ಸಹಾಯ ಮಾಡುತ್ತದೆ. ಹೃದಯದ ಆರೋಗ್ಯದಲ್ಲಿ ಸಕಾರಾತ್ಮಕ ಸುಧಾರಣೆಗೆ ಕಾರಣವಾಗುತ್ತದೆ.