ಹೊಸದಿಗಂತ ಡಿಜಿಟಲ್ ಡೆಸ್ಕ್:
ಪಹಲ್ಗಾಮ್ ಭಯೋತ್ಪಾದಕ ದಾಳಿ ವಿರುದ್ಧ ಭಾರತಕ್ಕೆ ವಿಶ್ವವೇ ಸಾಥ್ ನೀಡುತ್ತಿದ್ದು, ಈ ಸಮಯದಲ್ಲಿ ಪಾಕಿಸ್ತಾನ ಹೊಸ ಆಟ ಆರಂಭಿಸಿದ್ದು, ಉಗ್ರ ದಾಳಿ ತನಿಖೆಯಲ್ಲಿ ರಷ್ಯಾ ಮತ್ತು ಚೀನಾ ಪಾಲ್ಗೊಳ್ಳ ಬೇಕು ಎಂದು ಆಗ್ರಹಿಸಿದೆ.
ಪಹಲ್ಗಾಮ್ನಲ್ಲಿ ಕಳೆದ ಮಂಗಳವಾರ ಭಯೋತ್ಪಾದಕರು ದಾಳಿ ಮಾಡಿ 26 ಮಂದಿ ಪ್ರವಾಸಿಗರನ್ನು ಕೊಂದು ಹಾಕಿದ್ದರು. ಇದರ ಬೆನ್ನಲ್ಲೇ ಕೇಂದ್ರ ಸರಕಾರ ಪಾಕ್ ವಿರುದ್ಧ ಸಿಡಿದೆದ್ದಿದೆ.
ಇತ್ತ ದಾಳಿ ವಿಚಾರವಾಗಿ ನಡೆಯುವ ತನಿಖೆಯಲ್ಲಿ ರಷ್ಯಾ, ಚೀನಾ ಪಾಲ್ಗೊಳ್ಳಬೇಕು ಎಂದು ಪಾಕಿಸ್ತಾನ ಆಗ್ರಹಿಸಿದೆ.
ರಷ್ಯಾ ಸರ್ಕಾರ ನಡೆಸುವ ಆರ್ಐಎ ನೊವೊಸ್ಟಿ ಸುದ್ದಿ ಸಂಸ್ಥೆಗೆ ಇತ್ತೀಚೆಗೆ ನೀಡಿದ ಸಂದರ್ಶನದಲ್ಲಿ, ಪಾಕಿಸ್ತಾನದ ರಕ್ಷಣಾ ಸಚಿವ ಖವಾಜಾ ಆಸಿಫ್ ಮಾತನಾಡಿ, ‘ಈ ಬಿಕ್ಕಟ್ಟಿನಲ್ಲಿ ರಷ್ಯಾ ಅಥವಾ ಚೀನಾ ಅಥವಾ ಪಾಶ್ಚಿಮಾತ್ಯ ದೇಶಗಳು ಸಹ ತುಂಬಾ ಸಕಾರಾತ್ಮಕ ಪಾತ್ರವನ್ನು ವಹಿಸಬಹುದು ಎಂದು ನಾನು ಭಾವಿಸುತ್ತೇನೆ ಮತ್ತು ಅವರು ತನಿಖಾ ತಂಡವನ್ನು ಸ್ಥಾಪಿಸಬಹುದು, ಭಾರತ ಅಥವಾ ಮೋದಿ ಸುಳ್ಳು ಹೇಳುತ್ತಿದ್ದಾರೆಯೇ ಅಥವಾ ಅವರು ಸತ್ಯವನ್ನು ಹೇಳುತ್ತಿದ್ದಾರೆಯೇ ಎಂದು ತನಿಖೆ ಮಾಡಲು ಈ ಕೆಲಸವನ್ನು ನಿಯೋಜಿಸಬೇಕು. ಅಂತಾರಾಷ್ಟ್ರೀಯ ತಂಡವು ಅದನ್ನು ಕಂಡುಹಿಡಿಯಲಿ ಎಂದು ಆಗ್ರಹಿಸಿದರು.
ಇನ್ನು ಪಾಕಿಸ್ತಾನ ಪ್ರಧಾನಿ ಶೆಹಬಾಜ್ ಷರೀಫ್ ಕೂಡ ಅಂತಾರಾಷ್ಟ್ರೀಯ ತನಿಖೆ ನಡೆಸಲು ಪ್ರಸ್ತಾಪಿಸಿದ್ದಾರೆ ಎಂದು ಹೇಳಿದರು.
ಭಾರತದಲ್ಲಿ, ಕಾಶ್ಮೀರದಲ್ಲಿ ಈ ಘಟನೆಯ ಅಪರಾಧಿ ಯಾರು ಎಂಬುದನ್ನು ಕಂಡುಹಿಡಿಯೋಣ, ಮಾತು ಅಥವಾ ಖಾಲಿ ಹೇಳಿಕೆಗಳು ಯಾವುದೇ ಪರಿಣಾಮ ಬೀರುವುದಿಲ್ಲ. ಪಾಕಿಸ್ತಾನ ಭಾಗಿಯಾಗಿದೆ ಅಥವಾ ಈ ಜನರು ಪಾಕಿಸ್ತಾನದಿಂದ ಬೆಂಬಲಿತರಾಗಿದ್ದಾರೆ ಎಂಬುದಕ್ಕೆ ಕೆಲವು ಪುರಾವೆಗಳು ಇರಬೇಕು ಎಂದು ಖವಾಜಾ ಹೇಳಿಕೆಯನ್ನು ಸುದ್ದಿ ಸಂಸ್ಥೆ ಉಲ್ಲೇಖಿಸಿದೆ.