ಹೊಸ ದಿಗಂತ ಡಿಜಿಟಲ್ ಡೆಸ್ಕ್:
ರಾಷ್ಟ್ರಪತಿ ಆಳ್ವಿಕೆಯಲ್ಲಿರುವ ಮಣಿಪುರದಲ್ಲಿ ಶಾಂತಿ ಮತ್ತು ಸುವ್ಯವಸ್ಥೆ ಮರು ಸ್ಥಾಪನೆಯಾಗಲು ಉತ್ತಮ ಮತ್ತು ಬಲಿಷ್ಠ ಸರ್ಕಾರ ರಚಿಸುವಂತೆ 21 ಶಾಸಕರು ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರಿಗೆ ಪತ್ರ ಬರೆದಿದ್ದಾರೆ.
ರಾಷ್ಟ್ರಪತಿ ಆಳ್ವಿಕೆಯ ಕಳೆದು ಮೂರು ತಿಂಗಳಲ್ಲಿ ನಿರೀಕ್ಷಿಸಲಾಗಿದ್ದು, ಯಾವುದೇ ಬದಲಾವಣೆಗಳು ಆಗಿಲ್ಲ. ಮತ್ತೆ ರಾಜ್ಯದಲ್ಲಿ ಹಿಂಸೆ ಭುಗಿಲೇಳುವ ಆತಂಕದಲ್ಲಿ ಜನರು ಇದ್ದಾರೆ. ಹೀಗಾಗಿ ವಿಧಾನಸಭೆಯ ಅಧಿಕಾರವಧಿ 2027ರವರೆಗೆ ಇರುವುದರಿಂದ ರಾಜ್ಯದಲ್ಲಿ ಬಲಿಷ್ಠ ಸರ್ಕಾರ ರಚಿಸುವಂತೆ ಕೋರಿ 13 ಬಿಜೆಪಿ ಶಾಸಕರು, ಎನ್ಪಿಪಿಯ 3, ನಾಗಾ ಪೀಪಲ್ಸ್ ಫ್ರಂಟ್ನ ಮೂವರು ಮತ್ತು ಇಬ್ಬರು ಸ್ವತಂತ್ರ ಸದಸ್ಯರು ಮನವಿ ಮಾಡಿದ್ದಾರೆ.
ಮಣಿಪುರದಲ್ಲಿ ಶಾಂತಿ ಮರು ನೆಲೆಸಲು ಜನಪ್ರಿಯ ಸರ್ಕಾರವನ್ನು ರಚಿಸುವುದೊಂದೇ ಏಕೈಕ ಮಾರ್ಗ. ಜನರ ಹಿತದೃಷ್ಟಿಯಿಂದ ಸಾಧ್ಯವಾದಷ್ಟು ಬೇಗ ಸರ್ಕಾರ ಸ್ಥಾಪಿಸಲು ಅಗತ್ಯ ಕ್ರಮಗಳನ್ನು ತೆಗೆದುಕೊಳ್ಳಬೇಕು ಎಂದು ಶಾಸಕರು ಗೃಹ ಸಚಿವರನ್ನು ವಿನಂತಿಸಿದ್ದಾರೆ.
ಶಾಸಕರ ಈ ಪತ್ರವನ್ನು ಕಾಂಗ್ರೆಸ್ ಟೀಕಿಸಿದೆ. ರಾಜ್ಯ ಕಾಂಗ್ರೆಸ್ ಅಧ್ಯಕ್ಷ ಕೀಶಮ್ ಮೇಘಚಂದ್ರ ಸಿಂಗ್ ಅವರು 21 ಶಾಸಕರು ರಾಜ್ಯಪಾಲರನ್ನು ನಿರ್ಲಕ್ಷಿಸಿ ಕೇಂದ್ರಕ್ಕೆ ಪತ್ರ ಬರೆದಿರುವುದು ಸರಿಯಲ್ಲ. ರಾಜ್ಯದಲ್ಲಿ ಸರ್ಕಾರ ರಚಿಸುವ ಪ್ರಯತ್ನದಲ್ಲಿ ಸಾಂವಿಧಾನಿಕ ನಿಯಮಗಳನ್ನು ಉಲ್ಲಂಘಿಸಿದ್ದಾರೆ ಎಂದು ಅವರು ಆರೋಪಿಸಿದ್ದಾರೆ.