ಹೊಸದಿಗಂತ ಡಿಜಿಟಲ್ ಡೆಸ್ಕ್:
‘ಕಾಮಿಡಿ ಕಿಲಾಡಿಗಳು’ ಖ್ಯಾತಿಯ ಹಾಸ್ಯ ನಟ ರಾಕೇಶ್ ಪೂಜಾರಿ ನಿಧನ ಇಡೀ ಚಿತ್ರರಂಗಕ್ಕೆ ನೋವು ತಂದಿದೆ.ಉಡುಪಿಯ ಮಲ್ಪೆ ಸಮೀಪದ ಹೂಡೆಗೆ ಆಗಮಿಸಿದ ಅನೇಕ ಸೆಲೆಬ್ರಿಟಿಗಳು ಅಂತಿಮ ದರುಶನ ಪಡೆದಿದ್ದಾರೆ.
ನಟಿ ರಕ್ಷಿತಾ ಪ್ರೇಮ್ ಕೂಡ ಬಂದು ಕಣ್ಣೀರು ಸುರಿಸಿದ್ದಾರೆ. ಈ ವೇಳೆ ಅವರು ಮಾಧ್ಯಮಗಳ ಜೊತೆ ಮಾತನಾಡಿದ ಅವರು,ರಾಕೇಶ್ ಪೂಜಾರಿ ಜೊತೆಗಿನ ನೆನಪುಗಳನ್ನು ಮೆಲುಕು ಹಾಕಿದರು.
ತುಂಬ ವರ್ಷಗಳಿಂದ ನನಗೆ ರಾಕೇಶ್ ಪರಿಚಯ. ಅವನು ಕಾಮಿಡಿ ಕಿಲಾಡಿಗಳು ಗೆದ್ದ. ಅಷ್ಟೇ ಪ್ರತಿಭಾವಂತ ಕೂಡ. ತೆರೆ ಹಿಂದೆ ಅಷ್ಟೇ ಒಳ್ಳೆಯ ಹುಡುಗ ಕೂಡ ಹೌದು. ನಮ್ಮ ಕಾಮಿಡಿ ಕಿಲಾಡಿಗಳು ತಂಡ ಒಂದು ಕುಟುಂಬದ ರೀತಿ ಇರುತ್ತಿತ್ತು. ಇಷ್ಟು ಬೇಗ ಅವನು ಹೋಗಬಾರದಿತ್ತು. ಅವನಿಗೆ ತುಂಬ ಸಣ್ಣ ವಯಸ್ಸು. ಅವರ ತಂದೆ ಕೂಡ ಎರಡು ವರ್ಷಗಳ ಹಿಂದೆ ತೀರಿ ಹೋಗಿದ್ದರು ಎಂದಿದ್ದಾರೆ.
ಅವರ ಅಮ್ಮ ಮತ್ತು ತಂಗಿಯನ್ನು ನೋಡಿದರೆ ನಿಜವಾಗಿಯೂ ಬೇಜಾರು ಆಗುತ್ತದೆ. ರಾಕೇಶ್ ಆತ್ಮಕ್ಕೆ ಶಾಂತಿ ಸಿಗಲಿ’ ಎಂದು ರಕ್ಷಿತಾ ಪ್ರೇಮ್ ಅವರು ಕಂಬನಿ ಮಿಡಿದಿದ್ದಾರೆ.
‘ಈಗ ಎಲ್ಲವೂ ನೆನಪಾಗುತ್ತಿದೆ. ರಾಕೇಶ್ ಬಗ್ಗೆ ಏನು ನೆನಪಾಗಲ್ಲ ಅಂತ ಹೇಳೋಕೆ ಆಗಲ್ಲ. ಆರು ತಿಂಗಳ ಹಿಂದೆ ಅವನಿಗೆ ಅಪಘಾತ ಆಗಿತ್ತು. ಆಗ ನಾವೆಲ್ಲ ಅವನಿಗೆ ತುಂಬ ಬೈಯ್ದಿದ್ದೆವು. ತುಂಬ ಹುಷಾರಾಗಿ ಇರಬೇಕು, ಹೀಗೆಲ್ಲ ಗಾಡಿ ಓಡಿಸಬಾರದು ಅಂತ ಹೇಳಿದ್ದೆವು. ಹಲವಾರು ಬಾರಿ ನಮ್ಮ ಮನೆಗೆ ಊಟಕ್ಕೆ ಬಂದಿದ್ದ. ಜೊತೆಯಾಗಿ ನಕ್ಕಿದ್ದೇವೆ. ಅದನ್ನೆಲ್ಲ ಯಾವತ್ತೂ ಮರೆಯೋಕೆ ಆಗಲ್ಲ’ಎಂದು ರಕ್ಷಿತಾ ಪ್ರೇಮ್ ಹೇಳಿದ್ದಾರೆ.
ಅವನು ಮೊದಲ ದಿನದಿಂದಲೂ ಇನ್ಸ್ಟಾಗ್ರಾಮ್ನಲ್ಲಿ ನನ್ನ ಜೊತೆ ಇರುವ ಫೋಟೋದ ಡಿಪಿಯನ್ನೇ ಹಾಕಿಕೊಂಡಿದ್ದ. ಇವತ್ತು ಬೆಳಿಗ್ಗೆ ದರ್ಶನ್ ಕೂಡ ಫೋನ್ ಮಾಡಿ ಕೇಳಿದರು. ನಮಗೆಲ್ಲರಿಗೂ ಈ ಘಟನೆಯಿಂದ ತುಂಬ ನೋವಾಗಿದೆ’ ಎಂದಿದ್ದಾರೆ.
ಆ್ಯಂಕರ್ ಅನುಶ್ರೀ, ನಿರ್ದೇಶಕ ಯೋಗರಾಜ್ ಭಟ್ ಸೇರಿದಂತೆ ಅನೇಕರು ಅಂತಿಮ ದರುಶನ ಪಡೆದಿದ್ದಾರೆ.