ಹೊಸದಿಗಂತ ಡಿಜಿಟಲ್ ಡೆಸ್ಕ್:
ಮೈಸೂರು ಸ್ಯಾಂಡಲ್ ಸೋಪ್ನ ರಾಯಭಾರಿಯಾಗಿ ನಟಿ ತಮನ್ನಾ ಭಾಟಿಯಾ ಅವರನ್ನು ರಾಜ್ಯ ಸರಕಾರ ನೇಮಕ ಮಾಡಿದೆ. ಆದ್ರೆ ಕನ್ನಡದ ನಟಿಯರನ್ನು ಬಿಟ್ಟು ತಮನ್ನಾರನ್ನೇ ಮಾಡಿರುವುದಕ್ಕೆ ಭಾರೀ ವಿರೋಧ ವ್ಯಕ್ತವಾಗಿದೆ. ಈ ಬಗ್ಗೆ ಪರ ವಿರೋಧ ಚರ್ಚೆ ಸಾಕಷ್ಟು ನಡೆಯುತ್ತಿದೆ.
ಈ ಬಗ್ಗೆ ಇನ್ಸ್ಟಾಗ್ರಾಮ್ ಸ್ಟೋರಿಯಲ್ಲಿ ಖುದ್ದು ಸ್ಯಾಂಡಲ್ವುಡ್ ಕ್ವೀನ್ ರಮ್ಯಾ ಅವರು ಪ್ರತಿಕ್ರಿಯೆ ಕೊಟ್ಟಿದ್ದಾರೆ. ಇಂದು ಒಂದು ವಸ್ತುವನ್ನು ಮಾರುಕಟ್ಟೆಯಲ್ಲಿ ಪ್ರಚಾರ ಮಾಡಲು ಹತ್ತಾರು ದಾರಿಗಳಿರುತ್ತವೆ. ರಾಯಭಾರಿ ನೇಮಕ ಮಾಡಿ ಪ್ರಚಾರ ಮಾಡುವ ಅಗತ್ಯವಿಲ್ಲ. ಇದು ತೆರಿಗೆ ಪಾವತಿದಾರರ ಹಣ ದುರುಪಯೋಗವಷ್ಟೆ ಹೊರತು ಏನೂ ಪ್ರಯೋಜನವಿಲ್ಲ. ಇಂದು ಸೆಲೆಬ್ರಿಟಿಗಳು ಬಳಸುತ್ತಾರೆ ಎಂಬ ಮಾತ್ರಕ್ಕೆ ಜನರು ವಸ್ತುಗಳನ್ನು ಖರೀದಿಸುವುದಿಲ್ಲ. ನಾವು ಸೋಪ್ ಬಳಸಿದರೆ ನಟಿಯ ರೀತಿ ಆಗುವುದಿಲ್ಲ ಎಂಬುದು ಜನತೆಗೆ ಚೆನ್ನಾಗಿ ಗೊತ್ತಿದೆ. ಜನರು ಅದನ್ನು ಮೆಚ್ಚಿ ಖರೀದಿಸಿ ಬಳಸಬೇಕೆಂದರೆ ವಸ್ತುವಿನ ಗುಣಮಟ್ಟವಿರಬೇಕು ಎಂದು ಹೇಳಿದ್ದಾರೆ.
ಕರ್ನಾಟಕದಲ್ಲಿ ಮೈಸೂರು ಸ್ಯಾಂಡಲ್ ಸೋಪ್ಗೆ ದೀರ್ಘ ಇತಿಹಾಸವಿದೆ. ಪರಂಪರೆಯಿದೆ. ಪ್ರತಿ ಕನ್ನಡಿಗರು ಅದರ ರಾಯಭಾರಿಗಳು. ಮೈಸೂರು ಸ್ಯಾಂಡಲ್ ಸೋಪ್ ಅನ್ನು ಜಗತ್ತಿಗೆ ಪರಿಚಯಿಸಲು ಪ್ರತಿಯೊಬ್ಬರನ್ನೂ ಒಗ್ಗೂಡಿಸಿ. ಅದನ್ನು ಕನ್ನಡಿಗರು ಪ್ರೀತಿಯಿಂದ ಖುಷಿಯಿಂದ ಮಾಡುತ್ತಾರೆ. ಸಂಘಟಿತವಾಗಿ, ಸೃಜನಶೀಲವಾಗಿ ಗ್ರಾಹಕರೊಂದಿಗೆ ಸಂಬಂಧ ಹೊಂದುವುದು ಮುಖ್ಯವಾಗುತ್ತದೆ. ಆಪಲ್ ಬಹಳ ಯಶಸ್ವಿ ಉದ್ಯಮವಾಗಿ ಬೆಳೆದಿದೆ, ಆದರೆ ಅದಕ್ಕೆ ಸಂಭಾವನೆ ನೀಡಿ ನೇಮಿಸಿದ ಬ್ರಾಂಡ್ ಅಂಬಾಸಿಡರ್ ಇರಲಿಲ್ಲ ಎಂದು ಕೂಡ ನಟಿ ರಮ್ಯಾ ಅಸಮಾಧಾನ ಹೊರಹಾಕಿದ್ದಾರೆ.