ಹೊಸದಿಗಂತ ವರದಿ,ಯಾದಗಿರಿ:
ರಾಜ್ಯ ಕಾಂಗ್ರೆಸ್ ಪಾಳೆಯದಲ್ಲಿ ಎಲ್ಲವೂ ಸರಿಯಿಲ್ಲ ಎಂಬ ಆರೋಪಗಳ ಮಧ್ಯದಲ್ಲೇ ಜಿಲ್ಲಾ ಕಾಂಗ್ರೆಸ್ ಕಚೇರಿಗೆ ಸ್ವ ಪಕ್ಷದ ಮುಖಂಡರಿಂದಲೇ ಬೆಂಕಿ ಇಟ್ಟ ಘಟನೆ ಶುಕ್ರವಾರ ತಡರಾತ್ರಿ ನಗರದಲ್ಲಿ ನಡೆದಿದೆ.
ನಗರದ ಕನಕ ಸರ್ಕಲ್ ನಲ್ಲಿರುವ ಕಚೇರಿಗೆ ಬೆಂಕಿ ಹಚ್ಚಲಾಗಿದ್ದು, ಅಲ್ಲಿರುವ ಪೆಟ್ರೋಲ್ ಕ್ಯಾನ್ ಬಿಟ್ಟು ಹೋಗಿದ್ದಾರೆ. ಇದರಿಂದ ತಕ್ಷಣ ಕಾರ್ಯ ಪ್ರವೃತ್ತರಾದ ಪೊಲೀಸರು ಶನಿವಾರ ಸಂಜೆಯೊಳಗೆ ಆರೋಪಿಗಳನ್ನು ಪತ್ತೆ ಹಚ್ವುವಲ್ಲಿ ಯಶಸ್ವಿಯಾಗಿದ್ದಾರೆ.
ಶಂಕರ್ ಗೂಳಿ ಮತ್ತು ಸುರಪುರ ತಾಲೂಕಿನ ಪ್ರಭಾವಿ ಮುಖಂಡ ಈ ಕೃತ್ಯದಲ್ಲಿ ಭಾಗಿಯಾಗಿದ್ದು ಪೊಲೀಸ್ ಮೂಲಗಳು ಖಚಿತ ಪಡಿಸಿವೆ. ಸಧ್ಯ ಶಂಕರ್ ಗೂಳಿ ಎಂಬಾತನನ್ನು ಬಂಧಿಸಿದ್ದು, ಈತ ಮಹಿಳಾ ಕಾಂಗ್ರೆಸ್ ಜಿಲ್ಲಾಧ್ಯಕ್ಷೆ ಮಂಜೂಳಾ ಗೂಳಿ ಪತಿ.
ಶುಕ್ರವಾರವಷ್ಟೇ ಮಹಿಳಾ ಕಾಂಗ್ರೆಸ್ ಜಿಲ್ಲಾ ಘಟಕಕ್ಕೆ ನೂತನ ಅಧ್ಯಕ್ಷರನ್ನು ಕೆಪಿಸಿಸಿ ನೇಮಕ ಮಾಡಿ ಆದೇಶ ಹೊರಡಿಸಿತ್ತು. ಇದರಿಂದ ಆಕ್ರೋಶಗೊಂಡ ಹಾಲಿ ಅಧ್ಯಕ್ಷೆ ಮಂಜೂಳಾ ಗೂಳಿ ಪತಿ ಶಂಕರ್ ಮತ್ತು ಅವರ ಸಹಚರರು ಈ ಕೃತ್ಯ ನಡೆಸಿದ್ದಾರೆ ಎಂದು ಹೇಳಲಾಗುತ್ತಿದೆ.