ಹೊಸದಿಗಂತ ಚಿತ್ರದುರ್ಗ:
ಸರ್ಕಾರದ ನಿಯಮಗಳನ್ನು ಪಾಲಿಸದ ಖಾಸಗಿ ಶಿಕ್ಷಣ ಸಂಸ್ಥೆಗಳ ವಿರುದ್ಧ ಶಿಸ್ತುಕ್ರಮ ಜರುಗಿಸುವಂತೆ ಒತ್ತಾಯಿಸಿ ರೈತಸಂಘ ಹಾಗೂ ಹಸಿರು ಸೇನೆ ವತಿಯಿಂದ ಪ್ರತಿಭಟನೆ ನಡೆಸಲಾಯಿತು. ನಗರದ ಪ್ರವಾಸಿ ಮಂದಿರದಿಂದ ಹೊರಟ ಪ್ರತಿಭಟನಾಕಾರರು ಪ್ರಮುಖ ಬೀದಿಗಳಲ್ಲಿ ಮೆರವಣಿಗೆ ನಡೆಸಿದರು. ಬಳಿಕ ಸಾರ್ವಜನಿಕ ಶಿಕ್ಷಣ ಇಲಾಖೆ ಉಪನಿರ್ದೇಶಕರ ಕಚೇರಿಗೆ ತೆರಳಿ ಮನವಿ ಸಲ್ಲಿಸಿದರು.
ಖಾಸಗಿ ಶಿಕ್ಷಣ ಸಂಸ್ಥೆಗಳು ಸರಕಾರದ ನಿಯಮಾವಳಿಗಳನ್ನು ಗಾಳಿಗೆ ತೂರಿ ಮಕ್ಕಳ ಪೋಷಕರನ್ನು ಆರ್ಥಿಕ ಶೋಷಣೆ ಮಾಡುತ್ತಿವೆ. ಖಾಸಗಿ ಶಿಕ್ಷಣ ಸಂಸ್ಥೆಗಳು ಮನ ಬಂದಂತೆ ಶುಲ್ಕ ಪಡೆಯುತ್ತಿದ್ದು, ಸರಕಾರದ ನಿಯಮಾವಳಿಯ ಪ್ರಕಾರ ಶುಲ್ಕವನ್ನು ಪಡೆದು ವಿದ್ಯಾದಾನ ಮಾಡಬೇಕೆಂದು ಕಳೆದು ಮೂರು ವರ್ಷಗಳಿಂದ ಒತ್ತಾಯಿಸುತ್ತಾ ಬರಲಾಗಿದೆ. ಈ ಕುರಿತು ಸಾರ್ವಜನಿಕ ಶಿಕ್ಷಣ ಇಲಾಖೆ ಅಧಿಕಾರಿಗಳು ಹಾಗೂ ಜಿಲ್ಲಾಧಿಕಾರಿಗಳಿಗೂ ಮನವಿ ಸಲ್ಲಿಸಲಾಗಿತ್ತು. ಆದಾಗ್ಯೂ ಶಿಕ್ಷಣ ಸಂಸ್ಥೆಗಳ ವಿರುದ್ಧ ಯಾವುದೇ ಕ್ರಮ ಜರುಗಿಸಿಲ್ಲ ಎಂದು ಪ್ರತಿಭಟನಾಕಾರರು ದೂರಿದರು.
ಇದರಿಂದ ತಮ್ಮ ಮಕ್ಕಳಿಗೆ ಶಿಕ್ಷಣ ಕೊಡಿಸುವುದು ಪೋಷಕರಿಗೆ ಸವಾಲಾಗಿ ಪರಿಣಮಿಸಿದೆ. ಹಾಗಾಗಿ ಪೂರ್ವ ಪ್ರಾಥಮಿಕ ಶಿಕ್ಷಣ ಮೊದಲ್ಗೊಂಡು ಎಲ್ಲಾ ಸರಕಾರಿ ಶಾಲಾ ಕಾಲೇಜುಗಳನ್ನು ಖಾಸಗಿಯವರಂತೆ ಉನ್ನತೀಕರಿಸಬೇಕು. ಸರಕಾರಿ ಶಾಲೆಗಳನ್ನು ಮುಚ್ಚುವ ಸ್ಥಿತಿಗೆ ತಂದಿರುವ ಖಾಸಗಿ ಶಾಲೆಗಳ ವಾಹನಗಳನ್ನು ಹಳ್ಳಿಗಳಿಗೆ ಬರುವುದನ್ನು ಪ್ರತಿಬಂಧಿಸಬೇಕು. ಹಳ್ಳಿಗಳಲ್ಲಿರುವ ಸರಕಾರಿ ಶಾಲೆಗಳಲ್ಲಿ ಮಕ್ಕಳ ಸಂಖ್ಯೆ ದ್ವಿಗುಣಗೊಳ್ಳಲು ಕ್ರಮಕೈಗೊಳ್ಳಬೇಕು. ಆ ಮುಖಾಂತರ ಶಿಕ್ಷಣ ಬಡವರ ಮಕ್ಕಳಿಗೆ ಕೈಗೆಟಕುವಂತಿರಬೇಕು ಎಂದು ಒತ್ತಾಯಿಸಿದರು.
೨೦೨೪-೨೫ರ ಸಾಲಿನ ೧೦ನೇ ತರಗತಿ ಮತ್ತು ೧೨ನೇ ತರಗತಿಯ ಫಲಿತಾಂಶ ಕುಸಿತವಾಗಿರುವ ಶಾಲಾ ಕಾಲೇಜುಗಳಿಗೆ ಸೂಕ್ತ ಕ್ರಮ ಕೈಗೊಳ್ಳಬೇಕು. ೧೦ನೇ ತರಗತಿಯವರೆಗೆ ವಾರಕ್ಕೆ ಎರಡು ಅವಧಿ ಸಂಸ್ಕಾರ ಮತ್ತು ನೈತಿಕತೆಯನ್ನು ಬಲಗೊಳಿಸುವ ನೀತಿಪಾಠ ಬೋಧನೆ ಕಡ್ಡಾಯವಾಗಿರಬೇಕು. ಶಿಕ್ಷಣ ವ್ಯಾಪಾರವಲ್ಲ ಅದೊಂದು ಪ್ರಬುದ್ಧ ರಾಷ್ಟ್ರ ಕಟ್ಟುವ ಕಾಯಕ ಎಂಬ ಧ್ಯೇಯ ವಾಕ್ಯವನ್ನು ಎಲ್ಲಾ ಶಾಲೆಗಳ ಮುಂದೆ ಪ್ರದರ್ಶಿಸಬೇಕು. ಎಲ್ಲಾ ಖಾಸಗಿ ಶಿಕ್ಷಣ ಸಂಸ್ಥೆಗಳು ಸರಕಾರದ ನಿಯಮದ ಪ್ರಕಾರ ೬x೮ ಅಡಿ ಗಾತ್ರದ ಪ್ಲೆಕ್ಸ್ನಲ್ಲಿ ಶುಲ್ಕ ಆಕರಣೆಯ ನಿಯಮಗಳ ಅಡಿಯಲ್ಲಿ ಪ್ರತಿ ಮಾರ್ಚ್ ತಿಂಗಳಲ್ಲಿ ಶಾಲೆಯ ಮುಂದೆ ಪ್ರದರ್ಶಿಸಬೇಕು ಎಂದು ಆಗ್ರಹಿಸಿದರು.
ಬಹಳಷ್ಟು ಖಾಸಗಿ ಶಾಲೆಗಳು ನಿಯಮಬಾಹಿರವಾಗಿ ಯೂನಿಫಾರಂ, ಶೂ, ಟೈ, ಪುಸ್ತಕಗಳು ಮುಂತಾದವುಗಳನ್ನು ಮತ್ತು ಸ್ವಹಿತಕ್ಕಾಗಿ ವಾಹನ ಸೌಲಭ್ಯವನ್ನು ದುಬಾರಿ ಬೆಲೆಯಲ್ಲಿ ಪೂರೈಸಿ ಪೋಷಕರ ಆರ್ಥಿಕ ಶೋಷಣೆ ಮಾಡಲಾಗುತ್ತಿದೆ. ಸ್ಟೇಟ್ ಮತ್ತು ಸಿಬಿಎಸ್ಸಿ ಎಂದು ಪ್ರತ್ಯೇಕಿಸಿ ದುಬಾರಿ ಶುಲ್ಕ ಆಕರಿಸುತ್ತಿವೆ ಇದನ್ನು ಕೂಡಲೇ ನಿಯಂತ್ರಿಸಬೇಕು. ಕೂಡಲೇ ಇಂತಹ ಶಾಲೆಗಳ ಪರವಾನಿಗೆ ರದ್ದುಗೊಳಿಸಬೇಕು. ಈಗಾಗಲೇ ದುಬಾರಿ ಶುಲ್ಕ ಪಡೆದಿರುವ ಎಲ್ಲಾ ಶಾಲೆಗಳು ಗೌರವಯುತವಾಗಿ ಪೋಷಕರನ್ನು ಕ್ಷಮೆ ಕೇಳಿ ಅನಧಿಕೃತ ಶುಲ್ಕವನ್ನು ಹಿಂಪಾವತಿಸಬೇಕು ಎಂದು ಒತ್ತಾಯಿಸಿದರು.
ರೈತ ಸಂಘದ ರಾಜ್ಯ ಕಾರ್ಯಾಧ್ಯಕ್ಷ ಈಚಘಟ್ಟದ ಸಿದ್ದವೀರಪ್ಪ, ರೈತ ಮುಖಂಡರಾದ ತಿಪ್ಪೇಸ್ವಾಮಿ, ಬಸವರಾಜ್, ರಾಘವೇಂದ್ರ, ರಂಗಸ್ವಾಮಿ, ಮಂಜುನಾಥ್, ಸುರೇಶ, ಗೋವಿಂದಪ್ಪ, ದ್ರಾಕ್ಷಾಯಿಣಮ್ಮ, ಶಿವಲಿಂಗಪ್ಪ, ಅಜ್ಜಪ್ಪ ಸೇರಿದಂತೆ ಅನೇಕರು ಪ್ರತಿಭಟನೆಯಲ್ಲಿ ಭಾಗವಹಿಸಿದ್ದರು.