ಹೊಸದಿಗಂತ ಡಿಜಿಟಲ್ ಡೆಸ್ಕ್:
ಬೆಂಗಳೂರಿನಲ್ಲಿ ಪರಿಸರ ಜಾಗೃತಿಗೆ ನಾಂದಿ ಹಾಡುವಂತೆ, ಮಕ್ಕಳಲ್ಲಿ ಹಸಿರು ಇಂಧನ ನೀರಿನ ಸಂರಕ್ಷಣೆ ಸ್ವಚ್ಛತೆ ಮತ್ತು ವಾಯು ಗುಣಮಟ್ಟದ ಬಗ್ಗೆ ಅರಿವು ಮೂಡಿಸಲು ‘ಹವಾಮಾನ ಕಾರ್ಯಯೋಜನೆ ಕ್ಲಬ್’ಗಳನ್ನು ರಚಿಸಲು ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಮುಂದಾಗಿದ್ದಾರೆ.
ವಿಶ್ವ ಪರಿಸರ ದಿನಾಚರಣೆಗೆ ಮುಂಚಿತವಾಗಿ, ಬೆಂಗಳೂರನ್ನು ಹಸಿರು ಮತ್ತು ಸ್ವಚ್ಛವಾಗಿಡಲು, ಕ್ಲಬ್ಗಳನ್ನು ಸ್ಥಾಪಿಸಲಾಗುವುದು. ಪ್ರತಿ ಕ್ಲಬ್ಗೆ ಒಬ್ಬ ಶಿಕ್ಷಕರು ಮತ್ತು ಕನಿಷ್ಠ 25 ವಿದ್ಯಾರ್ಥಿಗಳು ಇರುತ್ತಾರೆ ಎಂದು ಹೇಳಿದರು.
ಈ ಯೋಜನೆಯ ಭಾಗವಾಗಿ, ಜೂನ್ 6ರಂದು ನೆಹರೂ ತಾರಾಲಯದಲ್ಲಿ ಕಾರ್ಯಕ್ರಮ ಆಯೋಜನೆ ಮಾಡಲಾಗಿದೆ. ಅಲ್ಲಿ ವಸ್ತು ಪ್ರದರ್ಶನದಿಂದ ಹಿಡಿದು ರಸಪ್ರಶ್ನೆ, ಚರ್ಚಾ ಸ್ಪರ್ಧೆಗಳ ಮೂಲಕ ಮಕ್ಕಳಲ್ಲಿ ಪರಿಸರ ಕುರಿತ ಜ್ಞಾನ ಬೆಳೆಸಲಾಗುತ್ತದೆ. ಇದಕ್ಕೆ ಈಗಾಗಲೇ ನೂರಾರು ಶಾಲೆಗಳು ನೋಂದಾಯಿಸಿಕೊಂಡಿವೆ.
ಬೆಂಗಳೂರು ವ್ಯಾಪ್ತಿಯಲ್ಲಿ 6,000 ಶಾಲೆಗಳಿವೆ. ಇದರಲ್ಲಿ 4,500 ಖಾಸಗಿ ಹಾಗೂ 1,500 ಸರ್ಕಾರಿ ಶಾಲೆಗಳಿವೆ. ಈ ಎಲ್ಲ ಶಾಲೆಗಳಿಗೂ ಪಾಲ್ಗೊಳ್ಳಲು ಆಹ್ವಾನ ನೀಡಲಾಗಿದೆ. 650 ಶಾಲೆಗಳು ಈಗಾಗಲೇ ಸಹಮತ ಸೂಚಿಸಿದ್ದು, 18 ಕ್ಲಬ್ಗಳು ಈಗಾಗಲೇ ಕಾರ್ಯನಿರ್ವಹಿಸುತ್ತಿವೆ ಎಂದು ಮಾಹಿತಿ ನೀಡಿದರು.