ಹೊಸದಿಗಂತ ಡಿಜಿಟಲ್ ಡೆಸ್ಕ್:
ಬೆಂಗಳೂರು ನಗರದ ಕಲ್ಯಾಣ ಮಂಟಪವೊಂದರಲ್ಲಿ ಕಳ್ಳರು ಕೈಚಳಕ ತೋರಿಸಿದ್ದು, ಸಂಬಂಧಿಕರಂತೆ ವಧು ಕೋಣೆಗೆ ತೆರಳಿ 25 ಲಕ್ಷ ರೂ. ಚಿನ್ನ ಕದ್ದು ಪರಾರಿಯಾಗಿರುವ ಘಟನೆ ಮಾಗಡಿ ರಸ್ತೆ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಶುಕ್ರವಾರ ನಡೆದಿದೆ.
ಮೂರು ದಿನಗಳ ಹಿಂದೆ ವೆಸ್ಟ್ ಆಫ್ ಕಾರ್ಡ್ ರಸ್ತೆಯ ಸಪ್ತಪದಿ ಕಲ್ಯಾಣ ಮಂಪಟದಲ್ಲಿ ನಡೆದ ಡಾ.ರಾಜ್ ಕುಮಾರ್ ಅಭಿಮಾನಿಗಳ ಸಂಘದ ಪ್ರಧಾನಕಾರ್ಯದರ್ಶಿ ಶಿವಶಂಕರ್ ಅವರ ಮಗಳ ಮದುವೆಯಲ್ಲಿ ಈ ಕಳ್ಳತನ ನಡೆದಿದೆ.
ಈ ಬಗ್ಗೆ ಶಿವಶಂಕರ್ ದೂರು ಆಧರಿಸಿ ಎಫ್ಐಆರ್ ದಾಖಲಿಸಿಕೊಂಡು ತನಿಖೆ ನಡೆಸಲಾಗುತ್ತಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಮೇ 28 ಮತ್ತು 29 ರಂದು ಸಪ್ತಪದಿ ಕಲ್ಯಾಣ ಮಂಟಪದಲ್ಲಿ ಮದುವೆ ನಡೆದಿತ್ತು. ಆರತಕ್ಷತೆ ವೇಳೆ ಸಂಬಂಧಿಕರ ಸೋಗಿನಲ್ಲಿ ವಧುವಿನ ಕೋಣೆಗೆ ತೆರಳಿರುವ ಕಿಡಿಗೇಡಿಗಳು ಆಭರಣವನ್ನು ಕಳವು ಮಾಡಿ ಪರಾರಿಯಾಗಿದ್ದಾರೆ.
ಮದುವೆ ಮಂಟಪಗಳಿಗೆ ಬರುವ ಅತಿಥಿಗಳಿಗೆ ಕೋಣೆಯ ಬಾಗಿಲುಗಳಿಗೆ ತಮ್ಮದೇ ಆದ ಬೀಗಗಳನ್ನು ಬಳಸುವಂತೆ ಸೂಚಿಸಲಾಗುತ್ತದೆ. ಆದರೆ, ಈ ಮದುವೆ ಮಂಟಪದಲ್ಲಿ ಮದುವೆ ಮಂಟಪದ ಸಿಬ್ಬಂದಿಯೇ ಬೀಗಗಳನ್ನು ಒದಗಿಸುತ್ತಿದ್ದರು ಎನ್ನಲಾಗಿದೆ.
ವಧುವಿನ ಕೋಣೆಯ ಕಡೆಗೆ ಹೋಗುವ ಮಾರ್ಗದಲ್ಲಿ ಯಾವುದೇ ಸಿಸಿಟಿವಿ ಕ್ಯಾಮೆರಾಗಳಿಲ್ಲ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಮಹೂರ್ತ ಮುಗಿದ ಬಳಿಕ ಆಭರಣ ಪರಿಶೀಲಿಸಿದಾಗ ಕಳ್ಳತನ ಕೃತ್ಯವು ಬೆಳಕಿಗೆ ಬಂದಿದೆ. ವಧುವಿನ ಬ್ಯಾಗ್ಗಳಲ್ಲಿ ಇರಿಸಲಾಗಿದ್ದ 3,00,000 ರೂ. ನಗದು ಮತ್ತು ಆಭರಣಗಳು ನಾಪತ್ತೆಯಾಗಿದೆ ಎಂದು ದೂರಿನಲ್ಲಿ ತಿಳಿಸಲಾಗಿದೆ.