ಹೊಸದಿಗಂತ ವರದಿ ಶಿವಮೊಗ್ಗ :
ಮನೆಗಳ್ಳತನ ಸೇರಿದಂತೆ ವಿವಿಧ ಪ್ರಕರಣಗಳಲ್ಲಿ ಪೊಲೀಸರಿಗೆ ಬೇಕಾಗಿದ್ದ ಬೆಂಗಳೂರಿನ ಅಂತಾರಾಜ್ಯ ಕಳ್ಳ ಕಲ್ಕರೆ ಮಂಜ (೪೭)ನ ಕಾಲಿಗೆ ಶುಕ್ರವಾರ ಗುಂಡು ಹೊಡೆದು ಪೊಲೀಸರು ಬಂಧಿಸಿದ್ದಾರೆ.
ಬೆಂಗಳೂರಿನ ಕಲ್ಕೆರೆ ನಿವಾಸಿಯಾದ ಈತ ನಗರದಲ್ಲಿ ನಡೆದ ಮನೆಗಳ್ಳತನದಲ್ಲಿ ಭಾಗಿಯಾಗಿರುವ ಬಗ್ಗೆ ಪೊಲೀಸರಿಗೆ ಮಾಹಿತಿ ಲಭ್ಯವಾಗಿತ್ತು. ಈತ ಕಳೆದ ಮೂರ್ನಾಲ್ಕು ದಿನಗಳಿಂದ ನಗರದಲ್ಲಿ ತಿರುಗಾಡುತ್ತಿರುವ ಬಗ್ಗೆ ಮಾಹಿತಿ ಪಡೆದ ಪೊಲೀಸರು ಆರೋಪಿ ಮಂಜನನ್ನು ಬಂಧಿಸಲು ಹೋಗಿದ್ದಾಗ ಪೊಲೀಸರ ಮೇಲೆಯೇ ಹಲ್ಲೆಗೆ ಯತ್ನಿಸಿದ್ದ.
ಶರಣಾಗುವಂತೆ ಸೂಚನೆ ನೀಡಿದ್ದಾಗ್ಯೂ ಅದನ್ನು ಲೆಕ್ಕಿಸದೆ ಪೊಲೀಸ್ ಪೇದೆ ದ್ಯಾಮಪ್ಪನ ಮೇಲೆ ಮಂಜ ಹಲ್ಲೆ ಮಾಡಿ ತಪ್ಪಿಸಿಕೊಳ್ಳಲೆತ್ನಿಸಿದ್ದ. ಬಂಧಿಸಲು ಮುಂದಾದ ಪಿಎಸ್ಐ ನವೀನ್ ಕುಮಾರ್ ಮೇಲೆಯೂ ಹಲ್ಲೆ ನಡೆಸಲು ಮುಂದಾಗಿದ್ದಾಗ ನವೀನ್ ಕುಮಾರ್ ಗಾಳಿಯಲ್ಲಿ ಗುಂಡು ಹಾರಿಸಿದರೂ ಬಗ್ಗದೆ ಪರಾರಿಯಾಗಲೆತ್ನಿಸಿದಾಗ ಕಾಲಿಗೆ ಗುಂಡು ಹೊಡೆದು ಬಂಧಿಸಲಾಗಿದೆ.
ಜಯನಗರ ಠಾಣಾ ಗಾಂಧಿನಗರದಲ್ಲಿ ಏಪ್ರಿಲ್ನಲ್ಲಿ ಮನೆಗಳ್ಳತನ ನಡೆದಿತ್ತು. ಮನೆಯಲ್ಲಿದ್ದ ಐ ೨೦ ಕಾರ್ ಹಾಗೂ ಸುಮಾರು ೧೧,೩೦,೦೦೦ ಚಿನ್ನಾಭರಣ, ನಗದು ಹಾಗೂ ಇತರ ವಸ್ತುಗಳನ್ನು ಕಳವು ಮಾಡಲಾಗಿತ್ತು. ಇದರಲ್ಲಿ ಆರೋಪಿ ಮಂಜುನಾಥನ ಪಾತ್ರವಿರುವುದು ಪೊಲೀಸರಿಗೆ ಖಚಿತವಾಗಿತ್ತು. ಇದರಿಂದಾಗಿ ಜಯನಗರ ಪೊಲೀಸರು ಬಂಧಿಸಲು ತೆರಳಿದ್ದಾಗ ಈ ಘಟನೆ ನಡೆದಿದೆ. ಈತನ ಮೇಲೆ ಸುಮಾರು ೨೪ ಪ್ರಕರಣಗಳು ವಿವಿಧ ಠಾಣೆಗಳಲ್ಲಿ ದಾಖಲಾಗಿವೆ.