ಹೊಸ ದಿಗಂತ ಡಿಜಿಟಲ್ ಡೆಸ್ಕ್:
ರಾಷ್ಟ್ರೀಯ ನಾಗರಿಕರ ನೋಂದಣಿ ಪ್ರಕ್ರಿಯೆ ನಿಧಾನಗೊಂಡಿದ್ದು, ವಿದೇಶಿಯರನ್ನು ಗುರುತಿಸುವ ಪ್ರಕ್ರಿಯೆಗೆ ವೇಗ ನೀಡುವುದಲ್ಲದೆ 1950ರ ಕಾನೂನು ಬಳಸಿ ವಿಚಾರಣೆಯೇ ಇಲ್ಲದೆ ಅಕ್ರಮ ವಲಸಿಗರನ್ನು ಅಸ್ಸಾಂನಿಂದ ಹೊರಹಾಕುತ್ತೇವೆ ಎಂದು ಮುಖ್ಯಮಂತ್ರಿ ಹಿಮಂತ ಬಿಸ್ವಾ ಶರ್ಮಾ ಗುಡುಗಿದ್ದಾರೆ.
ಯಾರಾದರೂ ವಿದೇಶಿಯರೆಂದು ಗುರುತಿಸಲ್ಪಟ್ಟರೆ, ಆ ವ್ಯಕ್ತಿಯನ್ನು ದೇಶದಿಂದ ಹೊರಹಾಕಲು ನಾವು ವಿದೇಶಿಯರ ನ್ಯಾಯಮಂಡಳಿಯೊಂದಿಗೆ ಪ್ರಕರಣವನ್ನು ಕೈಗೆತ್ತಿಕೊಳ್ಳಬೇಕಾಗಿಲ್ಲ. ಪೌರತ್ವ ಕಾಯ್ದೆಯ ಸೆಕ್ಷನ್ 60 ಕುರಿತ ಹಿಂದಿನ ವಿಚಾರಣೆಯ ಸಂದರ್ಭದಲ್ಲಿ, ವಿದೇಶಿಯರನ್ನು ದೇಶದಿಂದ ಹೊರಹಾಕಲು ಪ್ರತಿಬಾರಿಯೂ ನ್ಯಾಯಾಂಗವನ್ನು ಸಂಪರ್ಕಿಸುವುದು ಅಗತ್ಯವಿಲ್ಲ ಎಂದು ಸುಪ್ರೀಂ ಕೋರ್ಟ್ ಉಲ್ಲೇಖಿಸಿತ್ತು. ಅಲ್ಲದೆ ವಲಸಿಗರ ಗಡಿಪಾರು ಕಾನೂನು ಇನ್ನೂ ಜಾರಿಯಲ್ಲಿದೆ ಎಂದು ಸುಪ್ರೀಂ ಕೋರ್ಟ್ ಹೇಳಿದೆ. ಈ ಕಾನೂನಿನ ಪ್ರಕಾರ, ಜಿಲ್ಲಾಧಿಕಾರಿ ಆದೇಶ ಹೊರಡಿಸುವ ಮತ್ತು ಹೊರಹಾಕಲು ಅನುಮತಿ ನೀಡುವ ಅಧಿಕಾರವನ್ನು ಹೊಂದಿದ್ದಾರೆ ಎಂದು ಬಿಸ್ವಾ ಶರ್ಮಾ ಹೇಳಿದ್ದಾರೆ.
ಸರ್ಕಾರ ಈಗಾಗಲೇ ಹಲವರನ್ನು ಹೊರಹಾಕಿದೆ ಎಂದು ಅವರು ಹೇಳಿದರು. ಆದಾಗ್ಯೂ, ನ್ಯಾಯಾಲಯದಲ್ಲಿ ಬಾಕಿ ಇರುವ ಪ್ರಕರಣಗಳಿಂದಾಗಿ ಹೊರಹಾಕಲು ಆಗಿಲ್ಲ ಎಂದು ಅವರು ಹೇಳಿದರು.