ಹೊಸದಿಗಂತ ಡಿಜಿಟಲ್ ಡೆಸ್ಕ್:
ಬೆಂಗಳೂರು ಚಿನ್ನಸ್ವಾಮಿ ಸ್ಟೇಡಿಯಂ ಬಳಿ ನಡೆದ ಕಾಲ್ತುಳಿತದಲ್ಲಿ 11 ಮಂದಿ ಪ್ರಾಣ ಕಳೆದುಕೊಂಡಿದ್ದು, ಈ ದುರ್ಘಟನೆಗೆ ಸರ್ಕಾರವೇ ಹೊಣೆಗಾರ ಎಂಬ ಆಕ್ಷೇಪಣೆಗಳು ಕೇಳಿಬರುತ್ತಿವೆ. ಈ ಪ್ರಕರಣ ಸಂಬಂಧ ಸಿಐಡಿ ತನಿಖೆ ಪ್ರಾರಂಭವಾಗಿದ್ದು, ಮಾಜಿ ನಗರ ಪೊಲೀಸ್ ಕಮಿಷನರ್ ಬಿ.ದಯಾನಂದ್ ಸೇರಿದಂತೆ ಐವರು ಹಿರಿಯ ಅಧಿಕಾರಿಗಳನ್ನು ಅಮಾನತು ಮಾಡಿದ ಬೆನ್ನಲ್ಲೇ ಇದೀಗ IAS ಅಧಿಕಾರಿಗಳ ತಲೆದಂಡ ಆಗುವ ಸಾಧ್ಯತೆ ಕೂಡ ಇದೆ.
ವಿಧಾನಸೌಧ ಭದ್ರತಾ ವಿಭಾಗದ ಡಿಸಿಪಿ ಕರಿಬಸವನ ಗೌಡ ಅವರು ಜನಸಂದಣಿಯ ಅಪಾಯವನ್ನು ಮುಂಚಿತವಾಗಿಯೇ ಎಚ್ಚರಿಸಿ ಡಿಪಿಆರ್ ಎ ಅಧಿಕಾರಿಗಳಿಗೆ ಪತ್ರ ಬರೆದಿದ್ದರೂ, ಆದರೆ ಪತ್ರವನ್ನ DPRA ಐಎಎಸ್ ಅಧಿಕಾರಿ ಸತ್ಯವತಿ ತನ್ನ ಬಳಿ ಇಟ್ಟುಕೊಂಡಿದ್ದು, ಯಾವುದೇ ರೀತಿಯ ಮಾಹಿತಿಯನ್ನ ಮುಖ್ಯ ಕಾರ್ಯದರ್ಶಿಗೆ ನೀಡಿಲ್ಲ ಎನ್ನುವ ಮಾಹಿತಿ ಉನ್ನತ ಮೂಲಗಳಿಂದ ತಿಳಿದು ಬಂದಿದೆ ಎನ್ನಲಾಗ್ತಿದೆ.
ಕಾರ್ಯಕ್ರಮಕ್ಕೆ ಪಾಸ್ ನಿರ್ಬಂಧ, ಸಿಸಿಟಿವಿ ಅಳವಡಿಕೆ, ವೇದಿಕೆಯ ತಪಾಸಣೆ, ಎಲೆಕ್ಟ್ರಿಕಲ್ ಫಿಟ್ನೆಸ್, ಭದ್ರತಾ ಸಿಬ್ಬಂದಿ ನಿಯೋಜನೆ ಹಾಗೂ ಆಂಟಿ ಡ್ರೋನ್ ವ್ಯವಸ್ಥೆಗಳ ಅಗತ್ಯವಿತ್ತು. ಆದರೆ ಹೆಚ್ಚಿನ ಕ್ರಮ ಕೈಗೆತ್ತಿಕೊಳ್ಳದೇ ಇದ್ದುದರಿಂದ ಭದ್ರತಾ ವಿಫಲತೆ ಸಂಭವಿಸಿದೆ ಎನ್ನಲಾಗಿದೆ.
ಈ ಹಿನ್ನಲೆಯಲ್ಲಿ ಮುಂದಿನ ದಿನಗಳಲ್ಲಿ ಅಧಿಕಾರಿಗಳ ವಿರುದ್ಧ ಹೆಚ್ಚಿನ ಕ್ರಮ ಕೈಗೊಳ್ಳುವ ಸಾಧ್ಯತೆ ಇದೆ. ಸರಕಾರದ ನಿರ್ವಹಣೆ, ಪ್ರತಿಕ್ರಿಯೆ ಹಾಗೂ ತನಿಖಾ ವರದಿ ರಾಜ್ಯ ರಾಜಕಾರಣದಲ್ಲಿ ಚರ್ಚೆಗೆ ಕಾರಣವಾಗಿದೆ.