ಹೊಸದಿಗಂತ ವರದಿ ಕಾರವಾರ:
ಉತ್ತರ ಕನ್ನಡ ಜಿಲ್ಲೆಯಲ್ಲಿ ಮುಂಗಾರು ಭರ್ಜರಿಯಾಗಿ ಪ್ರವೇಶ ನೀಡಿದ್ದು ಬುಧವಾರ ಸಂಜೆ ಮತ್ತು ಗುರುವಾರ ಬೆಳಿಗ್ಗಿನ ಜಾವ ಸುರಿದ ನಿರಂತರ ಮಳೆಯಿಂದಾಗಿ ಜಿಲ್ಲಾ ಕೇಂದ್ರ ಕಾರವಾರದಲ್ಲಿ ಜನಜೀವನ ಅಸ್ತವ್ಯಸ್ತಗೊಂಡಿದೆ.
ನಗರದ ಬಹುತೇಕ ರಸ್ತೆಗಳಲ್ಲಿ ನೀರು ಹರಿದು ಹೋಗದೇ ರಸ್ತೆಯಲ್ಲಿ ನೀರು ನಿಂತಿದ್ದು ಜಿಲ್ಲಾ ಆಸ್ಪತ್ರೆಯ ಕೆಳ ಮಹಡಿಯಲ್ಲಿ ರೋಗಿಗಳು ದಾಖಲಾಗಿರುವ ವಾರ್ಡುಗಳಲ್ಲಿ ನೀರು ಪ್ರವೇಶಿಸಿದ ಕಾರಣ ಒಳ ರೋಗಿಗಳು ಪರದಾಟ ನಡೆಸುವಂತಾಗಿದೆ.
ಹಲವಾರು ಕಡೆಗಳಲ್ಲಿ ಜನವಸತಿ ಪ್ರದೇಶ ಮತ್ತು ಅಂಗಡಿಗಳಿಗೆ ನೀರು ನುಗ್ಗಿದ್ದು ನಗರದ ಗೀತಾಂಜಲಿ ಸರ್ಕಲ್ ಸುತ್ತ ಮುತ್ತಲಿನ ಪ್ರದೇಶಗಳಲ್ಲಿ ನೀರು ತುಂಬಿ ವಾಹನ ಸವಾರರು ಮತ್ತು ಜನ ಸಾಮಾನ್ಯರು ಪರದಾಟ ನಡೆಸುವಂತಾಗಿದೆ. ಹಬ್ಬುವಾಡ ರಸ್ತೆಯಲ್ಲಿ ಸಹ ನೀರು ತುಂಬಿ ಕೊಂಡಿದ್ದು ಸಾರಿಗೆ ಸಂಸ್ಥೆಯ ಘಟಕಕ್ಕೆ ನೀರು ನುಗ್ಗಿ ಸಂಪೂರ್ಣ ಜಲಮಯವಾಗಿದ್ದು ಚಾಲಕರು ಪ್ರಯಾಸಪಟ್ಟು ನೀರಿನಿಂದ ಬಸ್ಸುಗಳನ್ನು ಹೊರ ತೆಗೆಯುವಂತಾಗಿದೆ.
ನಗರದ ದೈವಜ್ಞ ಕಲ್ಯಾಣ ಮಂಟಪ, ದೋಬಿ ಘಾಟ್ ರಸ್ತೆಯಲ್ಲಿ ಗುಡ್ಡದ ಮೇಲಿಂದ ವ್ಯಾಪಕ ಪ್ರಮಾಣದಲ್ಲಿ ನೀರು ಹರಿದು ಬಂದಿದ್ದು ಗ್ರಾಮೀಣ ಪ್ರದೇಶಗಳಾದ ಚೆಂಡಿಯಾ ಅಮದಳ್ಳಿ ಭಾಗದಲ್ಲಿ ಭಾರೀ ಪ್ರಮಾಣದಲ್ಲಿ ಮಳೆ ಸುರಿದಿದ್ಧು ಬಿಣಗಾ ಬಳಿ ಗುಡ್ಡ ಕುಸಿತದ ಸಾಧ್ಯತೆ ಇರುವಲ್ಲಿ ಮುಂಜಾಗ್ರತಾ ಕ್ರಮವಾಗಿ ರಾಷ್ಟ್ರೀಯ ಹೆದ್ದಾರಿಯಲ್ಲಿ ಒಂದು ಬದಿಯಲ್ಲಿ ಸಂಚಾರಕ್ಕೆ ನಿರ್ಬಂಧ ಹೇರಲಾಗಿದ್ದು ಇನ್ನೊಂದು ಬದಿಯಲ್ಲಿ ಮಾತ್ರ ಸಂಚಾರಕ್ಕೆ ಅವಕಾಶ ಮಾಡಿ ಕೊಡಲಾಗಿದೆ.