ಹೊಸದಿಗಂತ ವರದಿ ಹಾವೇರಿ :
ಜಿಲ್ಲೆಯ ರಾಣೆಬೆನ್ನೂರ ತಾಲೂಕಿನ ಮೇಡ್ಲೇರಿ ಗ್ರಾಪಂ ಪಿಡಿಒ ಎಚ್.ರವಿಕುಮಾರ ಅವರನ್ನು ಜಿಪಂ ಸಿಇಒ ರುಚಿ ಬಿಂದಲ್ ಅವರು ಅಮಾನತು ಮಾಡಿ ಆದೇಶಿಸಿದ್ದಾರೆ.
ರಾಹುತನಕಟ್ಟಿ ಗ್ರಾಮ ಪಂಚಾಯತಿ ಖಾಯಂ ಪಿಡಿಒ ಆಗಿದ್ದ ಎಚ್. ರವಿಕುಮಾರಗೆ ಮೇಡ್ಲೇರಿ ಗ್ರಾಪಂ ಹೆಚ್ಚುವರಿ ಜವಾಬ್ದಾರಿ ನೀಡಲಾಗಿತ್ತು. ಇತ್ತೀಚಿಗೆ ಜಿಲ್ಲಾ ಪಂಚಾಯತ ಸಿಇಒ ರುಚಿ ಬಿಂದಲ್ ಮೇಡ್ಲೇರಿ ಗ್ರಾ.ಪಂಗೆ ಭೇಟಿ ನೀಡಿದ ವೇಳೆ ರವಿಕುಮಾರ ಹಾಜರಿರಲಿಲ್ಲ. ಅದೇ ರೀತಿ ರಾಹುತನಕಟ್ಟಿ ಗ್ರಾಮ ಪಂಚಾಯತಿ ಕಾರ್ಯಾಲಯದಲ್ಲಿ ಪರಿಶೀಲನೆ ಮಾಡಿದಾಗಲೂ ಅಲ್ಲಿ ರವಿಕುಮಾರ ಗೈರಾಗಿದ್ದರು.
ಈ ಹಿನ್ನೆಲೆಯಲ್ಲಿ ಕರ್ತವ್ಯ ಲೋಪ ಮತ್ತು ಕೇಂದ್ರ ಸ್ಥಾನದಲ್ಲಿ ಲಭ್ಯವಿರದ ಹಿನ್ನೆಲೆಯಲ್ಲಿ ಅವರನ್ನು ಅಮಾನತು ಮಾಡಿ ಜಿಪಂ ಸಿಇಒ ರುಚಿ ಬಿಂದಲ್ ಆದೇಶಿಸಿದ್ದಾರೆ.