ಅಯ್ಯೋ! ಅಪ್ಪನ ಬರ್ತ್ ಡೇ ದಿನವೇ ಮಗನಿಗೆ ಹೀಗಾಗ್ಬಾರ್ದಿತ್ತು! ಮಟನ್ ತರಲು ಹೋಗಿ ಮಸಣ ಸೇರಿದ ಯುವಕ

ಹೊಸದಿಗಂತ ಡಿಜಿಟಲ್‌ ಡೆಸ್ಕ್‌:

ಬನಶಂಕರಿ 2ನೇ ಹಂತದ ಶ್ರೀನಿವಾಸ ನಗರದಲ್ಲಿ ಭಾರೀ ಗಾಳಿ ಮಳೆಯಿಂದ ಅಪಘಾತ ಸಂಭವಿಸಿದೆ. ರಸ್ತೆಯಲ್ಲಿ ಬೈಕ್‌ನಲ್ಲಿ ಹೋಗುತ್ತಿದ್ದ ಅಕ್ಷಯ್ ಎಂಬ ಯುವಕನ ಮೇಲೆ ಮರದ ಕೊಂಬೆ ಉರುಳಿ ಬಿದ್ದು ಗಂಭೀರ ಗಾಯಗಳಾಗಿವೆ. ತೀವ್ರ ರಕ್ತಸ್ರಾವದಿಂದ ಬಳಲುತ್ತಿದ್ದ ಅಕ್ಷಯನನ್ನು ತಕ್ಷಣವೇ ಸ್ಥಳೀಯ ಆಸ್ಪತ್ರೆಯಲ್ಲಿ ಚಿಕಿತ್ಸೆಗಾಗಿ ದಾಖಲಿಸಿ, ನಂತರ ಹೆಚ್ಚಿನ ಚಿಕಿತ್ಸೆಗಾಗಿ ಜಯನಗರದ ಅಪೋಲೋ ಆಸ್ಪತ್ರೆಗೆ ಕರೆದೊಯ್ಯಲಾಯಿತು.

ಅಕ್ಷಯ್, ತನ್ನ ತಂದೆಯ ಹುಟ್ಟುಹಬ್ಬದ ನಿಮಿತ್ತ ಮಟನ್ ತರಲು ಹೋಗಿದ್ದ ಸಂದರ್ಭದಲ್ಲಿ ಈ ದುರ್ಘಟನೆ ಸಂಭವಿಸಿದೆ. ದೋಬಿ ಘಾಟ್ ಬೃಂದಾವನ ನಗರ ನಿವಾಸಿಯಾದ ಅಕ್ಷಯ್ ತಲೆಗೆ ಗಂಭೀರವಾಗಿ ಗಾಯಗೊಂಡಿದ್ದು, ಮೂರ್ಛೆ ಹೋಗಿದ್ದ ಈತನನ್ನು ಸ್ಥಳೀಯರು ರಕ್ಷಿಸಿ ಆಸ್ಪತ್ರೆಗೆ ದಾಖಲಿಸಿದ್ದಾರೆ. ಘಟನೆಯ ತೀವ್ರತೆಗೆ ಶಸ್ತ್ರಚಿಕಿತ್ಸೆ ಅಗತ್ಯವಾಯಿತೆಂದು ವೈದ್ಯರು ನಿರ್ಧರಿಸಿ, ತಕ್ಷಣವೇ ಮೂರು ಗಂಟೆಗಳ ಕಾಲ ತೀವ್ರ ಶಸ್ತ್ರಚಿಕಿತ್ಸೆ ನಡೆಸಲಾಯಿತು.

ಈ ನಡುವೆ ಕುಟುಂಬಸ್ಥರು ಆಸ್ಪತ್ರೆ ವೆಚ್ಚ ಪೂರೈಸಲು ಹಣದ ತೊಂದರೆಯೊಂದಿಗೆ ಪರದಾಡುತ್ತಿದ್ದು, ಈಗಾಗಲೇ 1.5 ಲಕ್ಷ ರೂಪಾಯಿ ಪಾವತಿಸಲಾಗಿದೆ. ಬಿಬಿಎಂಪಿ ಅಥವಾ ಇತರ ಅಧಿಕಾರಿಗಳು ಸ್ಪಂದಿಸದ ಬಗ್ಗೆ ಕುಟುಂಬದವರು ಅಳಲು ತೋಡಿಕೊಂಡಿದ್ದಾರೆ. ಕೊನೆಗೂ ಬಿಬಿಎಂಪಿಯ ಅರಣ್ಯಾಧಿಕಾರಿ ರಂಗನಾಥ್ ಸ್ವಾಮಿ ಆಸ್ಪತ್ರೆಗೆ ಬಂದು ಅಕ್ಷಯನ ಆರೋಗ್ಯ ವಿಚಾರಿಸಿದರು ಮತ್ತು ಚಿಕಿತ್ಸೆಗಾಗಿ ಸಂಪೂರ್ಣ ವೆಚ್ಚವನ್ನು ಬಿಬಿಎಂಪಿ ಭರಿಸುವುದಾಗಿ ಭರವಸೆ ನೀಡಿದ್ದಾರೆ.

ಅಕ್ಷಯ್ ಈಗಾಗಲೇ ಚಿಂತಾಜನಕ ಸ್ಥಿತಿಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾನೆ. ಗಾಳಿ ಮಳೆಯಿಂದ ಒಣಗಿದ ಕೊಂಬೆ ಉರುಳಿ ಈ ಅವಘಡ ಸಂಭವಿಸಿದ್ದು, ಮುನ್ನೆಚ್ಚರಿಕೆ ಕ್ರಮಗಳ ಕೊರತೆಯ ಬಗ್ಗೆ ಮತ್ತೊಮ್ಮೆ ಚರ್ಚೆ ಉಂಟಾಗಿದೆ.

- Advertisement - Ply
Nova

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!