ಹೊಸದಿಗಂತ ವರದಿ ಶಿವಮೊಗ್ಗ:
ಹೊಸನಗರ ತಾಲ್ಲೂಕು ಮಾಸ್ತಿಕಟ್ಟೆ ಗ್ರಾಮ ಪಂಚಾಯತಿ ವ್ಯಾಪ್ತಿಯ ಮಾಣಿ ಡ್ಯಾಮ್ ಬಳಿ ಕಾಂತಾರ ಸಿನಿಮಾದ ಚಿತ್ರೀಕರಣ ಸಂದರ್ಭದಲ್ಲಿ ದುರ್ಘಟನೆ ನಡೆದಿದೆ ಎಂಬುದು ಸುಳ್ಳು ಸುದ್ದಿ ಎಂದು ಹೊಸನಗರದ ಸರ್ಕಲ್ ಇನ್ಸ್ಪೆಕ್ಟರ್ ಗುರಣ್ಣ ಎಸ್ ಹೆಬ್ಬಾಳ್ ಸ್ಪಷ್ಟಪಡಿಸಿದ್ದಾರೆ.
ಅವರು ಭಾನುವಾರ ಮಾಸ್ತಿಕಟ್ಟೆ ಬಳಿ ಕಾಂತಾರ ಸಿನಿಮಾದ ಶೂಟಿಂಗ್ ನಡೆಯುತ್ತಿದ್ದೂ ಅಲ್ಲಿಗೆ ಭೇಟಿ ನೀಡಿ ಸ್ಥಳ ಪರಿಶೀಲಿಸಿ ಮಾತನಾಡಿದರು.
ಶನಿವಾರ ಸಂಜೆಯಿಂದ ಕೆಲವು ಮಾಧ್ಯಮಗಳಲ್ಲಿ ಮೂವತ್ತು ಜನರು ನೀರಿನಲ್ಲಿ ಮುಳುಗಿ ಪ್ರಾಣಪಾಯದಿಂದ ಪಾರಾಗಿದ್ದಾರೆ ಎಂದು ಹಾಗೂ ಸಿನಿಮಾದ ಕ್ಯಾಮರಾಗಳು ನೀರಿನಲ್ಲಿ ಮುಳುಗಿದೆ ಎಂಬ ಸುದ್ದಿ ಸುಳ್ಳಾಗಿದ್ದು ಶನಿವಾರ ಸಂಜೆ ಹೊಳೆಯ ಬದಿ ಹಾಕಿರುವ ಸಿನಿಮಾ ಸೆಟ್ ಗಾಳಿಗೆ ಹಾರಿದ್ದು ಬಿಟ್ಟರೆ ಯಾವುದೇ ಅನಾಹುತ ಆಗಿಲ್ಲ. ಅಲ್ಲದೇ ಸಿನಿಮಾ ಚಿತ್ರೀಕರಣ ಸಂಬಂಧಿಸಿದ ಎಲ್ಲಾ ಅನುಮತಿ ಪಡೆದಿದ್ದಾರೆ ಎಂದು ಸ್ಪಷ್ಟಪಡಿಸಿದರು.